ಕನಕಪುರ: ‘ವಿಶ್ವಮಟ್ಟದಲ್ಲಿ ಛಾಪು ಮೂಡಿಸಿ ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಬೆಂಗಳೂರಿನಂಥ ಮಹಾನಗರ ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿಯನ್ನು ನಾವೆಲ್ಲರೂ ಮುಂದುವರಿಸಬೇಕು’ ಎಂದು ತಹಶೀಲ್ದಾರ್ ಡಾ.ಸ್ಮಿತಾರಾಮು ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ 114ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲಿ ಹಲವು ಮಹಾ ನಗರಗಳಿದ್ದರೂ, ಬೆಂಗಳೂರು ಮಹಾನಗರವು ಅವೆಲ್ಲವುಗಳಿಂತ ದೇಶಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ. ಇಂತಹ ನಗರ ನಿರ್ಮಾಣ ಮಾಡಲು ಕೆಂಪೇಗೌಡ ಅವರ ಶ್ರಮ ಮತ್ತು ತ್ಯಾಗವನ್ನು ಗೌರವಿಸಬೇಕು ಎಂದರು.
ನೀಲಿ ರಮೇಶ್ ಮಾತನಾಡಿ, ‘ಕೆಂಪೇಗೌಡರು ವಿಶ್ವಮಟ್ಟದ ನಗರವನ್ನು ನಮಗೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅವರ ಸ್ಮರಣೆಗಾಗಿ ಕನಕಪುರದಲ್ಲಿ ಒಂದು ಸರ್ಕಲ್ಗೆ ಅವರ ಹೆಸರು ಇಟ್ಟು ಸ್ಮರಿಸಬೇಕು’ ಎಂದರು.
ವಿವಿಧ ಸಂಘಟನೆಗಳ ಮಲ್ಲಿಕಾರ್ಜುನ್, ಕೂಗಿ ಗಿರಿಯಪ್ಪ, ಶಿವಲಿಂಗೇಗೌಡ, ಚಿಕ್ಕಕೆಂಪೇಗೌಡ ಮಾತನಾಡಿ, ಕೆಂಪೇಗೌಡರು ನಡೆದ ಬಂದ ದಾರಿ ಮತ್ತು ಬೆಂಗಳೂರು ನಗರ ಕಟ್ಟಲು ಅವರು ಪಟ್ಟ ಶ್ರಮದ ಬಗ್ಗೆ ತಿಳಿಸಿದರು.
ಜನಪ್ರತಿನಿಧಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವುದಕ್ಕೆ ನಗರಸಭೆ ಸದಸ್ಯ ಸ್ಟುಡಿಯೊ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಾಲ್ಲೂಕು ಆಡಳಿತದಿಂದ ಸನ್ಮಾನಿಸಲಾಯಿತು.
ಗೇಡ್-2 ತಹಶೀಲ್ದಾರ್ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಭೈರಪ್ಪ, ಆಹಾರ ಇಲಾಖೆ ಶಿರಸ್ತೇದಾರ್ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ.ಸ್ಮಿತಾರಾಮು ಮಾತನಾಡಿದರು. ಶಿವಕುಮಾರ್ ಭೈರಪ್ಪ ಉಪಸ್ಥಿತರಿದ್ದರು