ಚನ್ನಪಟ್ಟಣ: ‘ಕೆಂಪೇಗೌಡರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಇಡೀ ಸಮಾಜವನ್ನು ಅಭಿವೃದ್ಧಿ ದೃಷ್ಟಿಯಿಂದ ಮುನ್ನಡೆಸಿದವರು’ ಎಂದು ಪಿಡಿಒ ಶಿವಲಿಂಗಯ್ಯ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೋಡಂಬಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕೆಂಪೇಗೌಡರ ಜಯಂತಿ’ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
‘ಕೆಂಪೇಗೌಡರು ಒಂದೇ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ ಎಂಬುದಕ್ಕೆ ಅವರು ಕಟ್ಟಿದ ಬೆಂಗಳೂರು ನಗರವೇ ಸಾಕ್ಷಿ. ಪ್ರತಿಯೊಂದು ಸಮುದಾಯದ ಜನರಿಗೂ ಒಂದೊಂದು ಕೇರಿಯನ್ನು ಆ ಸಮುದಾಯದ ಹೆಸರಿನಲ್ಲೇ ಕಟ್ಟಿಕೊಟಿದ್ದಾರೆ’ ಎಂದು ತಿಳಿಸಿದರು.
ಮುಖಂಡ ಕೆ.ಎಸ್.ನಾಗರಾಜು ಮಾತನಾಡಿ, ‘ರಾಜ್ಯ ಸರ್ಕಾರವು ಕೆಂಪೇಗೌಡರ ಜೀವನವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು. ಜತೆಗೆ ಕೆಂಪೇಗೌಡರ ಹುಟ್ಟೂರನ್ನು ಅಭಿವೃದ್ಧಿ ಪಡಿಸಬೇಕು’ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಬೀರಯ್ಯ, ಸದಸ್ಯರಾದ ಕೆ.ಎಂ. ಮಹೇಶ್, ಬಸವರಾಜು, ಮುಖಂಡರಾದ ಬಾಬು, ಕೆ.ಎಸ್.ನಾಗರಾಜು, ಪ್ರವೀಣ್, ಬಿಲ್ ಕಲೆಕ್ಟರ್ ವೆಂಕಟೇಶ್, ಸಿಬ್ಬಂದಿ ಇದ್ದರು.