ಕನಕಪುರ: ಧಾರ್ಮಿಕ ಪ್ರಸಿದ್ಧ ಹಾಗೂ ಶಕ್ತಿದೇವತೆ ಎನಿಸಿಕೊಂಡಿರುವ ಕೊಟ್ಟಗಾಳು ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಈ ಜಾತ್ರಾ ಮಹೋತ್ಸವ ತಾಲ್ಲೂಕಿನಲ್ಲಿಯೇ ತುಂಬಾ ವಿಶಿಷ್ಟ ಆಚರಣೆಯೊಂದಿಗೆ ನಡೆಯುವುದು ವಾಡಿಕೆ. ಬೆಳಿಗ್ಗೆ ಮಾರಮ್ಮ ದೇವಿ ಅಗ್ನಿಕೊಂಡೋತ್ಸವ ನಡೆಯಿತು.
ವಿಶೇಷವಾಗಿ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಹರಕೆ ಹೊತ್ತ ಭಕ್ತರು ಕುರಿ,ಮೇಕೆ, ಕೋಳಿಗಳನ್ನು ದೇವರಿಗೆ ಒಪ್ಪಿಸುವುದು ವಾಡಿಕೆ. ಅದರಂತೆ ಬುಧವಾರ ಸಂಜೆ ಸಾವಿರಾರು ಸಂಖ್ಯೆ ಕುರಿ, ಕೋಳಿ, ಮೇಕೆಗಳನ್ನು ದೇವರಿಗೆ ಬಲಿ ನೀಡಲಾಯಿತು.
ಅಪಾರ ಸಂಖ್ಯೆ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಗೆ ಬರುವ ಎಲ್ಲಾ ಭಕ್ತರಿಗೂ ಯಾವುದೇ ರೀತಿ ತೊಂದರೆ ಆಗದಂತೆ ಪ್ರಸಾದ ಸಿಗುವಂತೆ 20ಕ್ಕೂ ಹೆಚ್ಚು ಕೌಂಟರ್ಗಳನ್ನು ತೆರೆಯಲಾಗಿತ್ತು. ಭಕ್ತರಿಗೆ ಮುದ್ದೆ ಮತ್ತು ಕುರಿ – ಮೇಕೆ ಸಂಬಾರು ಅಡುಗೆ ತಯಾರು ಮಾಡಲಾಗಿತ್ತು.
ಬೆಳಿಗ್ಗೆ 11ರಿಂದ ಸಂಜೆ 4ರವರೆಗೂ ಪ್ರಸಾದ ವಿತರಣೆ ಕಾರ್ಯ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತೆ ಕಲ್ಪಿಸಿದ್ದರು.