ಆವಣಿಯಲ್ಲಿ ಲವ–ಕುಶ ಮಂದಿರಕ್ಕೆ ಶಂಕುಸ್ಥಾಪನೆ

ಮುಳಬಾಗಿಲು: ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮಹಾರಾಜ್ ಮತ್ತು ಉಪಾಧ್ಯಕ್ಷ ಕಮಲ ನಯನದಾಸ್ ಶಾಸ್ತ್ರಿ ಹಾಗೂ ಸಂಸದ ಎಸ್.ಮುನಿಸ್ವಾಮಿ ಆವಣಿಯಲ್ಲಿ ಲವ–ಕುಶ ಮಂದಿರಕ್ಕೆ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆ ನೆರವೇರಿಸಿದರು.
ಐತಿಹಾಸಿಕ ಮತ್ತು ಪೌರಾಣಿಕವಾಗಿ ಮಹತ್ವ ಪಡೆದಿರುವ ಆವಂತಿಕಾ ಕ್ಷೇತ್ರ ಎಂಬ ಖ್ಯಾತಿಗೆ ಒಳಗಾಗಿರುವ ಆವಣಿಯಲ್ಲಿ ಸೀತೆಯು ಲವ–ಕುಶರಿಗೆ ಜನ್ಮನೀಡಿದ ಪವಿತ್ರ ಸ್ಥಳ ಎಂಬ ನಂಬಿಕೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಆವಣಿಯಲ್ಲಿ ಲವ–ಕುಶ ಮಂದಿರ ನಿರ್ಮಾಣ ಆಗಲಿದೆ ಎಂದು ಮಹಂತ್ ನೃತ್ಯ ಗೋಪಾಲದಾಸ್ ತಿಳಿಸಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಆವಣಿ ಈಗಾಗಲೇ ಪೌರಾಣಿಕವಾಗಿ ಮಹತ್ವ ಪಡೆದಿದೆ. ಲವ–ಕುಶರ ಮಂದಿರ ನಿರ್ಮಾಣ ಆಗುತ್ತಿರುವುದು ಖುಷಿಯ ಸಂಗತಿ. ಮಂದಿರದ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ಮತ್ತು ಸಹಾಯ ಮಾಡಲಾಗುವುದು ಎಂದು
ಹೇಳಿದರು.
ಲವ–ಕುಶ ಮಂದಿರದ ಶಂಕುಸ್ಥಾಪನೆಗೆ ಆಗಮಿಸಿದ ರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಕುರುಡುಮಲೆ ಗಣಪತಿಗೆ ಪೂಜೆ ಸಲ್ಲಿಸಿ ನಂತರ ನಗರದ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಪೂರ್ಣ ಕುಂಭ ಸ್ವಾಗತ ಕೋರಿದರು.
ಮುಖಂಡ ಶೀಗೇಹಳ್ಳಿ ಸುಂದರ್, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಾಸು, ಲವಕುಶ ರಾಮ ಜನ್ಮಭೂಮಿ ಟ್ರಸ್ಟ್ ತಾಲ್ಲೂಕು ಅಧ್ಯಕ್ಷ ಸಿ.ಚಂದ್ರಶೇಖರ್, ಹೆಬ್ಬಣಿ ರವಿ, ಕೃಷ್ಣ ಮೂರ್ತಿ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.