ಚನ್ನಪಟ್ಟಣ: ತಾಲ್ಲೂಕಿನ ಚಿಕ್ಕಮಳೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಚಿರತೆ ದಾಳಿಗೆ ಕರು ಮತ್ತುಎರಡು ಬೀದಿ ನಾಯಿಗಳು ಬಲಿಯಾಗಿವೆ.
ಈ ಭಾಗದಲ್ಲಿ ಚಿರತೆಗಳು ಕಂಡುಬರುತ್ತಿದ್ದು, ಆಗಾಗ್ಗೆ ಬೀದಿನಾಯಿಗಳು, ಜಾನುವಾರು ಮೇಲೆ ದಾಳಿ ನಡೆಸುತ್ತಿವೆ. ರಾತ್ರಿಯ ವೇಳೆ ಈ ಭಾಗದಲ್ಲಿ ಓಡಾಡುವುದೇ ದುಸ್ತರವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ಬೋನು ಇಟ್ಟು ಚಿರತೆ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗೋದಾಮಿಗೆ ಬೆಂಕಿ
ರಾಮನಗರ: ಇಲ್ಲಿನ ಹುಣಸನಹಳ್ಳಿ ರಸ್ತೆಯಲ್ಲಿನ ಯಾರಬ್ ನಗರದಲ್ಲಿ ಇರುವ ಟೈರ್ ಗೋದಾಮಿನಲ್ಲಿ ಬುಧವಾರ ಅಗ್ನಿ ಆಕಸ್ಮಿಕ ಸಂಭವಿಸಿದೆ.
ಬೆಳಿಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಗೋದಾಮಿನಲ್ಲಿ ಸಂಗ್ರಹಿಸಿದ್ದ ಹಳೆಯ ಟೈರ್ಗಳು ಹೊತ್ತಿ ಉರಿದಿವೆ. ಅಗ್ನಿ ಜ್ವಾಲೆ ಮುಗಿಲೆತ್ತರಕ್ಕೆ ವ್ಯಾಪಿಸಿದ್ದು, ಸುತ್ತಲೂ ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಐದು ವಾಹನ ಬಳಸಿ ಬೆಂಕಿ ನಂದಿಸಿದರು.
ಈ ಕಟ್ಟಡ ಅಕ್ರಂ ಷರೀಫ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಅಕ್ಕಪಕ್ಕದಲ್ಲಿ ಮನೆಗಳು ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ರಾಮನಗರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.