ರಾಮನಗರ: ಜಿಲ್ಲೆಯ ಮಾಗಡಿ ತಾಲ್ಲೂಕಿನ ಕದರಯ್ಯನಪಾಳ್ಯದಲ್ಲಿ ಶುಕ್ರವಾರ ರಾತ್ರಿ ಮನೆಗೆ ನುಗ್ಗಿದ ಚಿರತೆಯೊಂದು ಮೂರು ವರ್ಷದ ಬಾಲಕನನ್ನು ಹೊತ್ತೊಯ್ದು ಕೊಂದು ಹಾಕಿದೆ.
ಚಂದ್ರಪ್ಪ ಮತ್ತು ಮಂಗಳಗೌರಮ್ಮರ ಪುತ್ರ ಹೇಮಂತ್ ಮೃತ ಬಾಲಕ. ಶುಕ್ರವಾರ ರಾತ್ರಿ ಮಾಗಡಿ ಸುತ್ತ ಮಳೆಯಾಗಿದ್ದು ವಿದ್ಯುತ್ ಸ್ಥಗಿತಗೊಂಡಿತ್ತು. ಹೀಗಾಗಿ ಸೆಕೆ ಹೆಚ್ಚಾಗಿದ್ದು, ಮನೆಯ ಬಾಗಿಲು ತೆರೆದಿಟ್ಟು ಎಲ್ಲರೂ ಒಳಗೆ ಮಲಗಿದ್ದರು.
ರಾತ್ರಿ 8.30ರ ಸುಮಾರಿಗೆ ಮನೆಗೆ ನುಗ್ಗಿದ ಚಿರತೆ ಬಾಲಕನನ್ನು ಹೊತ್ತೊಯ್ದಿದೆ. ಮನೆಯವರು ಗಾಬರಿ ಗೊಂಡು ಸುತ್ತಮುತ್ತ ಹುಡುಕಾಡಿದ್ದಾರೆ. ಬಳಿಕ ಮನೆ ಹತ್ತಿರದ ಪೊದೆಯೊಳಗೆ ಮಗುವಿನ ಶವ ಸಿಕ್ಕಿದ್ದು, ಭಾಗಶಃ ಚಿರತೆ ತಿಂದಿತ್ತು.
ಚಂದ್ರಪ್ಪ ಮತ್ತು ಮಂಗಳಗೌರಮ್ಮ ದಂಪತಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡೇರಿಯವರು. ಮಂಗಳಗೌರಮ್ಮ ವಾರದ ಹಿಂದೆ ತಾಯಿ ಮನೆಗೆ ಮಗುವಿನೊಂದಿಗೆ ಬಂದಿದ್ದರು. ಮಗುವಿನ ಅಂತ್ಯಕ್ರಿಯೆ ದೊಡ್ಡೇರಿಯಲ್ಲಿ ನಡೆಯಿತು.
ಪರಿಹಾರ: ಅರಣ್ಯ ಸಚಿವ ಆನಂದ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಕುಟುಂಬದವರಿಗೆ ₹ 7 ಲಕ್ಷ ಪರಿಹಾರ ನೀಡು ವುದಾಗಿ ತಿಳಿಸಿದರು. ನರಭಕ್ಷಕ ಚಿರತೆ ಸೆರೆಗೆ ಭಾನುವಾರದಿಂದಲೇ ಕಾರ್ಯಾಚರಣೆ ಅರಂಭಿಸುವಂತೆ ಅವರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.