ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Election Results 2024 | ಮುಗುಳ್ನಗೆಯಿಂದ ‘ಬಂಡೆ’ ಒಡೆದ ಗೌಡರ ಅಳಿಯ!

Published 4 ಜೂನ್ 2024, 23:43 IST
Last Updated 4 ಜೂನ್ 2024, 23:43 IST
ಅಕ್ಷರ ಗಾತ್ರ

ರಾಮನಗರ: ರಾಜ್ಯವಷ್ಟೇ ಅಲ್ಲದೇ ದೇಶದ ಗಮನ ಸೆಳೆದಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಮತದಾರರ ಹೃದಯ ಗೆಲ್ಲುವ ಮೂಲಕ, ಅಭೂತಪೂರ್ವ ಜಯ ದಾಖಲಿಸಿದ್ದಾರೆ. ಸತತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಸುರೇಶ್ ಅವರ ಈ ಸೋಲು ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರಿಗಾದ ಹಿನ್ನಡೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ಶಿವಕುಮಾರ್ ಕುಟುಂಬದ ನಡುವಣ ಪ್ರತಿಷ್ಠೆಯಾಗಿದ್ದ ಈ ಚುನಾವಣೆಯಲ್ಲಿ ಗೌಡರ ಅಳಿಯ ಮಂಜುನಾಥ್ ಸಂಸತ್ ಪ್ರವೇಶ ಕ್ಷೇತ್ರದ ಮೈತ್ರಿ ಪಕ್ಷಗಳಿಗೆ ಉತ್ಸಾಹ ತುಂಬಿದೆ.

ಚುನಾವಣೆಯುದ್ದಕ್ಕೂ ಮಂಜುನಾಥ್ ಕುರಿತು ‘ಹೃದಯವಂತ’ ಎಂಬ ಮಾತುಗಳು ಕಾರ್ಯಕರ್ತರು ಮತ್ತು ಜನಸಾಮಾನ್ಯರ ಬಾಯಲ್ಲಿ ಹರಿದಾಡಿದವು. ಈ ಬಾಯಿಂದ ಬಾಯಿಗೆ ನಡೆದ ಸ್ವಯಂಪ್ರೇರಿತ ಪ್ರಚಾರದ ಅಲೆಯಲ್ಲಿ ಸುರೇಶ್ ಮಾಡಿದ ಅಭಿವೃದ್ಧಿ ಕೆಲಸ, ಅವರ ಅಣ್ಣನ ಪ್ರಭಾವ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಸಾಧನೆಗಳು ಕೊಚ್ಚಿ ಹೋದವು. ಕ್ಷೇತ್ರದಲ್ಲಿ ದಿನದಂದಿ ದಿನಕ್ಕೆ ಏಳುತ್ತಿದ್ದ ಮಂಜುನಾಥ್ ಪರವಾದ ಅಲೆಯು ಸುನಾಮಿಯಂತೆ ಮತದಾರರನ್ನು ಆವರಿಸಿತು.ಹಿಂದಿನ ಮೂರೂ ಚುನಾವಣೆಗಳಲ್ಲಿ ಮತ ಎಣಿಕೆಗೂ ಮುಂಚೆಯೇ ಸುರೇಶ್ ಗೆಲುವು ಖಚಿತ ಎನ್ನುವ ವಾತಾವರಣ ಇರುತ್ತಿತ್ತು. ಈ ಸಲ ಅವರಿಗೆ ಎದುರಾಳಿಯಾಗಿ ಮಂಜುನಾಥ್ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಆ ವಾತಾವರಣದಲ್ಲಿ ಬದಲಾವಣೆ ಆಗತೊಡಗಿತು. ಸುರೇಶ್ ವಿರುದ್ಧ ವಿರೋಧ ಪಕ್ಷದವರು ಮಾಡಿದ ಅಧಿಕಾರ ದರ್ಪ, ದೌರ್ಜನ್ಯ ಹಾಗೂ ಒರಟು ವ್ಯಕ್ತಿತ್ವದ ಆರೋಪಗಳು ಮತದಾರರ ಮನಸ್ಸಿಗೆ ನಾಟಿದವು.

ಜಿಲ್ಲೆಯೊಳಗಿನ ಅಧಿಕಾರ ಮತ್ತು ರಾಜಕೀಯ ಸ್ಥಾನಮಾನಗಳನ್ನು ಡಿ.ಕೆ ಸಹೋದರರು ತಮ್ಮ ಒಕ್ಕಲಿಗ ಸಮುದಾಯದವರಿಗಷ್ಟೇ ನೀಡಿದ್ದು ಅಹಿಂದ ಸೇರಿದಂತೆ ಇತರ ಸಮುದಾಯಗಳಲ್ಲಿ ಅಸಮಾಧಾನದ ಹೊಗೆಯಾಗಿ ಒಳೇಟು ಕೊಟ್ಟಿತು. ಆದರೂ, ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಒಕ್ಕಲಿಗರ ಒಲವು ಮಾತ್ರ ಮಂಜುನಾಥ್ ಪರವಾಗಿ ವ್ಯಕ್ತವಾಯಿತು.

ಪಂಚಾಯಿತಿ ಮಟ್ಟದಿಂದ ಹಿಡಿದು ಜಿಲ್ಲಾ ಹಂತದ ಮೈತ್ರಿ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಅಭ್ಯರ್ಥಿಯೊಬ್ಬರಿಂದ ನಾಮಪತ್ರ ಹಿಂಪಡೆಯುವಂತೆ ಮಾಡಿದರೂ ಸುರೇಶ್ ಗೆಲುವಿನ ಸನಿಹ ಬರಲಾಗಲಿಲ್ಲ.ರಾಮನಗರದ ವೈದ್ಯಕೀಯ ಕಾಲೇಜು ಸ್ಥಳಾಂತರ ಬೆಳವಣಿಗೆ, ಅದರ ವಿರುದ್ಧ ನಡೆದ ಹೋರಾಟ, ಜಿಲ್ಲೆಯ ಹೆಸರು ಬದಲಾವಣೆಯ ಮಾತು, ಕನಕಪುರ ಕೇಂದ್ರಿತ ಅಭಿವೃದ್ಧಿಗೆ ಆದ್ಯತೆ ವಿಷಯಗಳು ಮತದಾರರನ್ನು
ಭಾವನಾತ್ಮಕವಾಗಿ ಪ್ರಭಾವಿಸಿ, ಸುರೇಶ್ ವಿರುದ್ಧದ ಮತಗಳಾಗಿ ಪರಿವರ್ತನೆಯಾಗಲು ಕಾರಣವಾದವು.

ಈ ನನ್ನ ಗೆಲುವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಶಕ್ತಿಗಿಂತ ದೊಡ್ಡದು ಬೇರಾವ ಶಕ್ತಿಯೂ
ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಕ್ಷೇತ್ರದ ಜನರ ನಂಬಿಕೆಗೆ ಧಕ್ಕೆಯಾಗದಂತೆ ಅವರ ಸೇವೆ ಮಾಡುತ್ತೇನೆ
ಡಾ. ಸಿ.ಎನ್. ಮಂಜುನಾಥ್, ವಿಜೇತ ಬಿಜೆಪಿ ಅಭ್ಯರ್ಥಿ ಬೆಂಗಳೂರು ಗ್ರಾಮಾಂತರ
ಸೇಡು ತೀರಿಸಿಕೊಂಡ ಎಚ್‌ಡಿಕೆ
ಬಿಜೆಪಿ ಅನುದಾನ ಹಂಚಿಕೆ ತಾರತಮ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ದನಿ ಎತ್ತಿದ್ದ ಸುರೇಶ್ ಪ್ರತ್ಯೇಕ ರಾಜ್ಯದ ಬೇಡಿಕೆಯ ಎಚ್ಚರಿಕೆ ನೀಡಿದ್ದರು. ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಮುಜಗರಕ್ಕೀಡು ಮಾಡಿದ್ದ ಈ ಬೆಳವಣಿಗೆಯಿಂದ ಸುರೇಶ್ ಮೇಲೆ ಬಿಜೆಪಿ ಕೆಂಗಣ್ಣು ಬಿದ್ದಿತ್ತಲ್ಲದೆ ಅವರ ಸೋಲಿಸುವ ಶಪಥಕ್ಕೂ ಕಾರಣವಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚನ್ನಪಟ್ಟಣದಲ್ಲಿ ರೋಡ್ ಶೊ ನಡೆಸಿ ಸುರೇಶ್ ಸೋಲಿಗೆ ಕಹಳೆ ಮೊಳಗಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಭದ್ರಕೋಟೆಯಾದ ರಾಮನಗರದಲ್ಲಿ ಪುತ್ರ ನಿಖಿಲ್‌ ಕುಮಾರ್‌ ಅವರಿಗಾದ ಸೋಲಿನಿಂದ ಕಂಗೆಟ್ಟಿದ್ದ ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಡಿ.ಕೆ ಸಹೋದರರ ವಿರುದ್ಧ ಸೇಡಿಗಾಗಿ ಕಾಯುತ್ತಿದ್ದರು. ಬಿಜೆಪಿ ಮತ್ತು ಜೆಡಿಎಸ್‌ನ ಸೇಡು ಸಹ ಫಲಿತಾಂಶದಲ್ಲಿ ಪ್ರತಿಧ್ವನಿಸಿದೆ.
ನಿರೀಕ್ಷೆ ಮೀರಿದ ಗೆಲುವಿಗೆ ಮನದುಂಬಿದೆ
ರಾಮನಗರ: ‘ಮತದಾರರು ಇಷ್ಟೊಂದು ದೊಡ್ಡ ಗೆಲುವಿನ ಉಡುಗೊರೆ ನೀಡುತ್ತಾರೆಂದು ನಾನೂ ನಿರೀಕ್ಷಿರಲಿಲ್ಲ. ತೀವ್ರ ಪೈಪೋಟಿ ಇರುವುದರಿಂದ 50 ಸಾವಿರದಿಂದ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವೆ. ಪಕ್ಷಾತೀತ ಮತದಾರರು ಮನಸ್ಸು ಮಾಡಿದರೆ 2 ಲಕ್ಷ ಮತಗಳ ಮುನ್ನಡೆ ಬರಬಹುದು ಎಂದು ಊಹಿಸಿದ್ದೆ. ಆದರೆ ಕ್ಷೇತ್ರದ ಜನರು ನನ್ನ ಊಹೆಯನ್ನು ಮೀರಿದ ಗೆಲುವನ್ನು ದಯಪಾಲಿಸಿದ್ದಾರೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೇಳಿದರು. ತಮ್ಮ ಗೆಲುವು ಖಚಿತವಾಗುತ್ತಿದ್ದಂತೆ ನಗರದ ಹೊರವಲಯದ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಪತ್ನಿ ಅನಸೂಯ ಅವರೊಂದಿಗೆ ಮಂಗಳವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಈ ನನ್ನ ಗೆಲುವು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮುಖಂಡರು ಕಾರ್ಯಕರ್ತರು ಹಾಗೂ ಮತದಾರರ ಶ್ರಮದ ಫಲವಾಗಿದೆ. ಹಾಗಾಗಿ ಈ ಗೆಲುವನ್ನು ಅವರಿಗೆ ಅರ್ಪಿಸುವೆ. ನಾನು ಹೋದ ಕಡೆಯೆಲ್ಲಾ ಮೈತ್ರಿಕೂಟದ ಕಾರ್ಯಕರ್ತರಷ್ಟೇ ಅಲ್ಲದೆ ಪಕ್ಷಾತೀತ ಬಂಧುಗಳು ಸಹ ನನ್ನನ್ನು ಕಂಡು ಬೆಂಬಲ ವ್ಯಕ್ತಪಡಿಸಿ ಮತ ಹಾಕಿದ್ದಾರೆ. ಅವರೆಲ್ಲರಿಗೂ ನಾನು ಋಣಿ’ ಎಂದರು. ‘ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಲೇಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಗದರ್ಶನ ಮಾಡಿದರು. ಗೃಹ ಸಚಿವ ಅಮಿತ್ ಶಾ ಅವರು ಚನ್ನಪಟ್ಟಣಕ್ಕೆ ಬಂದು ರೋಡ್ ಷೋ ನಡೆಸಿ ಪ್ರಚಾರ ನಡೆಸಿದರು. ಜೆಡಿಎಸ್‌ನ ರಾಷ್ಟ್ರೀಯ ನಾಯಕ ಎಚ್‌.ಡಿ. ದೇವೇಗೌಡ ಅವರು ಪ್ರಚಾರ ಮಾಡಿದರು. ರಾಜ್ಯ ನಾಯಕರಾದ ಎಚ್‌.ಡಿ. ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನನಗೆ ಮಾರ್ಗದರ್ಶನ ಮಾಡಿ ಗೆಲುವಿಗೆ ಕಾರಣರಾಗಿದ್ದಾರೆ. ಎರಡೂ ಪಕ್ಷಗಳ ಹಾಲಿ ಮತ್ತ ಮಾಜಿ ಶಾಸಕರು ಮುಖಂಡರ ಶ್ರಮವನ್ನು ಮರೆಯುವಂತಿಲ್ಲ’ ಎಂದು ನೆನೆದರು. ‘ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆಯಾದಾಗಿನಿಂದ ಎರಡೂ ಪಕ್ಷಗಳ ಮುಖಡರು ಹಾಗೂ ಕಾರ್ಯಕರ್ತರು ಹಗಲು–ರಾತ್ರಿ ನನ್ನ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ನಾನು ಪ್ರಚಾರಕ್ಕೆ ಹೋದಲ್ಲೆಲ್ಲಾ ಮತದಾರರು ನನಗೆ ತುಂಬು ಹೃದಯದ ಪ್ರೀತಿಯನ್ನು ಧಾರೆ ಎರೆದಿದ್ದಾರೆ. ಹೈ ವೋಲ್ಟೇಜ್ ಕ್ಷೇತ್ರದಲ್ಲಿ ನನಗೆ ಐತಿಹಾಸಿಕ ಗೆಲುವು ತಂದು ಕೊಟ್ಟಿದ್ದಾರೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT