ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಳೂರು ಅಪ್ರಮೇಯ ಬ್ರಹ್ಮರಥೋತ್ಸವ ಸೋಮವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮಧ್ಯಾಹ್ನ 12 ಗಂಟೆಯಿಂದ 12.30ರವರೆಗೆ ಅಭಿಜಿನ್ ಲಗ್ನದಲ್ಲಿ ಸರ್ಕಾರಿ ಸೇವೆ ಬ್ರಹ್ಮ ರಥೋತ್ಸವ ನಡೆಯಿತು. ತಹಶೀಲ್ದಾರ್ ನರಸಿಂಹಮೂರ್ತಿ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲಸ್ಥಾನಕ್ಕೆ ಆಗಮಿಸಿತು.
ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥವನ್ನು ಎಳೆದು, ಹೂವು, ಹಣ್ಣು, ದವನ ಎಸೆದು ಪುನೀತರಾದರು. ಬ್ರಹ್ಮ ರಥೋತ್ಸವದ ಪ್ರಯುಕ್ತ ಕಳೆದ ಒಂದು ವಾರದಿಂದ ಅಂಕುರಾರ್ಪಣ, ಹಂಸಾರೋಹಣ, ಕಲ್ಯಾಣ ಮಹೋತ್ಸವ, ವೈರಮುಡಿ ಮುಂತಾದ ದೇವತಾ ಕಾರ್ಯಗಳು ನಡೆದಿದ್ದವು.
ರಥೋತ್ಸವದಂದು ನೇರವಾಗಿ ಸೂರ್ಯರಶ್ಮಿ ಅಪ್ರಮೇಯ ಮೂರ್ತಿಯ ಪಾದಗಳ ಮೇಲೆ ಬೀಳುವುದು ಇಲ್ಲಿಯ ವಿಶೇಷ. ಈ ಅಚ್ಚರಿಯನ್ನು ವೀಕ್ಷಿಸಲು ಭಕ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸರದಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿದರು.
ತಾಲ್ಲೂಕಿನ ಭಕ್ತರಷ್ಟೇ ಅಲ್ಲದೆ ಅಕ್ಕಪಕ್ಕದ ತಾಲ್ಲೂಕು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ಮುಜರಾಯಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಕಚೇರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.