ಹಾರೋಹಳ್ಳಿ: ತಾಲ್ಲೂಕಿನ ಹಳ್ಳಿಕೆರೆ ದೊಡ್ಡಿ ಗ್ರಾಮದಲ್ಲಿ ಭಾನುವಾರ ಕಾಡಾನೆ ದಾಳಿಯಿಂದಾಗಿ ರೈತ ತಿಮ್ಮೇಗೌಡ (63) ಎಂಬವರು ಮೃತಪಟ್ಟಿದ್ದಾರೆ.
ಬೆಳಿಗ್ಗೆ 5.30ರ ಸುಮಾರಿಗೆ ರೇಷ್ಮೆ ತೋಟಕ್ಕೆ ಹೋಗುತ್ತಿದ್ದ ತಿಮ್ಮಪ್ಪ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಆಗ ಅವರು ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿಲ್ಲ. ನೆಲಕ್ಕೆ ಕುಸಿದ ಅವರನ್ನು ಕಾಡಾನೆ ತುಳಿದು ಹಾಕಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು. ಕಾಡಾನೆಗಳನ್ನು ನಿಯಂತ್ರಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ಸಿಸಿಎಫ್ ಲಿಂಗರಾಜು ಹಾಗೂ ಇಲಾಖೆಯ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.