ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃವಂದನಾ: ರಾಮನಗರ ಮತ್ತೆ ಪ್ರಥಮ

ಈ ಹಣಕಾಸು ವರ್ಷದಲ್ಲಿ ಫಲಾನುಭವಿಗಳಿಗೆ ಒಟ್ಟು 2.66 ಕೋಟಿ ವಿತರಣೆ
Last Updated 6 ಫೆಬ್ರುವರಿ 2021, 12:15 IST
ಅಕ್ಷರ ಗಾತ್ರ

ರಾಮನಗರ: ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಅನುಷ್ಟಾನದಲ್ಲಿ (ಪಿಎಂಎಂವಿವೈ) ರಾಮನಗರ ಜಿಲ್ಲೆಯು ರಾಜ್ಯದಲ್ಲಿಯೇ ಸತತ ಏಳನೇ ಬಾರಿಗೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. 2020ರ ಜುಲೈ ನಿಂದ ಈ ವರ್ಷ ಜನವರಿವರೆಗೆ ಮೊದಲನೇ ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ರಾಜ್ಯಕ್ಕೇ ಮಾದರಿಯಾಗಿ ಹೊರಹೊಮ್ಮಿದೆ.

ಮಾತೃವಂದನಾ ಯೋಜನೆಯನ್ನು ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ 2017ರ ಜನವರಿ 1 ರಿಂದ ಅನುಷ್ಠಾನಕ್ಕೆ ತರಲಾಗಿದೆ. ಯೋಜನೆ ಆರಂಭಗೊಂಡ ಮೂರುವರೆ ವರ್ಷಗಳಲ್ಲಿ ಯೋಜನೆಯನ್ನು ಮನೆ ಮನೆ ತಲುಪಿಸುವಲ್ಲಿ ಜಿಲ್ಲಾ ಪಂಚಾಯಿತಿ ತೆಗೆದುಕೊಂಡ ಕಾಳಜಿಯಿಂದ ಈ ಸಾಧನೆ ಸಾಧ್ಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಸಹ ಈ ಕುರಿತು ಈಚೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಜಿಲ್ಲೆಯಲ್ಲಿ ಸುಮಾರು 11 ಲಕ್ಷ ಜನಸಂಖ್ಯೆ ಇದೆ. ಈ ಪೈಕಿ ಸದ್ಯ 4750 ಗರ್ಭಿಣಿಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರು ಜಿಲ್ಲೆಯಲ್ಲಿರುವ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡುವುದರ ಜೊತೆಗೆ ಅವರನ್ನು ನೋಂದಣಿ ಮಾಡಿಸುತ್ತಾರೆ. ನಿಯಮಿತವಾಗಿ ಇಲಾಖೆಯ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ. ‘ಜಿಲ್ಲಾಧಿಕಾರಿ ಎಂ.ಎಸ್‍. ಅರ್ಚನಾ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಅವರ ವಿಶೇಷ ಆಸಕ್ತಿಯಿಂದಾಗಿ ಈ ಯೋಜನೆಯು ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಸಫಲಗೊಂಡಿದೆ. ಸಿಡಿಪಿಒಗಳಾದ ಮಂಜುನಾಥ್‍, ದಿನೇಶ್‍, ಸಿದ್ದಲಿಂಗಯ್ಯ, ಸುರೇಂದ್ರ ಸೇರಿದಂತೆ ನಮ್ಮೆಲ್ಲ ಸಿಬ್ಬಂದಿ ಇದರ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿ.ವಿ. ರಾಮನ್‍.

ಆನ್‍ಲೈನ್‍ ನೆರವು: ಮಾತೃವಂದನಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ಸಮನ್ವಯ ಅಧಿಕಾರಿಯನ್ನಾಗಿ ಸತೀಶ್‍ ಅವರನ್ನು ನೇಮಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಬ್ಯಾಂಕ್‍ ಇಲ್ಲವೆ ಅಂಚೆ ಇಲಾಖೆಯಲ್ಲಿ ಖಾತೆ ತೆರೆದುಕೊಡಲಾಗಿದೆ. ಜಿಲ್ಲೆಯಲ್ಲಿರುವ ಗರ್ಭಿಣಿಯರು ಮತ್ತು ಬಾಣಂತಿಯರ ವಿವರವನ್ನು ಆನ್‍ಲೈನ್‍ನಲ್ಲಿ ದಾಖಲು ಮಾಡಲಾಗಿದೆ. ಪ್ರತಿ ದಿನವೂ ಯೋಜನೆಯ ಪ್ರಗತಿಯನ್ನು ಇದರಿಂದ ಅರಿತುಕೊಳ್ಳಲು ಸಹಾಯಕವಾಗಿದೆ. ಜೊತೆಗೆ ಸಮರ್ಪಕವಾಗಿ ಅನುಷ್ಠಾನಗೊಳ್ಳಲು ನೆರವಾಗಿದೆ ಎನ್ನುತ್ತಾರೆ ಜಿ.ಪಂ. ಸಿಇಒ ಇಕ್ರಂ.

ಗುರಿ ಮೀರಿದ ಸಾಧನೆ

ರಾಮನಗರ ಜಿಲ್ಲೆಗೆ 2021ರ ಜನವರಿವರೆಗೆ ಒಟ್ಟು 4749 ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಯೋಜನೆಯ ಪ್ರಯೋಜನವನ್ನು ತಲುಪಿಸುವ ಗುರಿ ನೀಡಲಾಗಿತ್ತು. ಕಳೆದ ತಿಂಗಳ ಅಂತ್ಯಕ್ಕೆ ಜಿಲ್ಲೆಯಲ್ಲಿ 7226 ಮಂದಿ ಬಾಣಂತಿಯರು ಮತ್ತು ಗರ್ಭಿಣಿಯರನ್ನು ಗುರುತಿಸಿ ಅವರಿಗೆ ನೆರವನ್ನು ನೀಡುವ ಮೂಲಕ ಶೇ. 128.44 ರಷ್ಟು ಸಾಧನೆ ಮಾಡಲಾಗಿದೆ. ಯೋಜನೆ ಅಡಿ ಮೊದಲ ಪ್ರಸವದ ಗರ್ಭಿಣಿ ಮತ್ತು ಬಾಣಂತಿಯರಿಗೆ ತಲಾ ₨5 ಸಾವಿರ ಪ್ರೋತ್ಸಾಧನ ನೀಡಲಾಗುತ್ತದೆ. ಸಕಾಲದಲ್ಲಿ ಹಣವು ಅರ್ಹ ಫಲಾನುಭವಿಗಳಿಗೆ ತಲುಪುತ್ತಿದೆ. ಮೂರು ಹಂತಗಳಲ್ಲಿ ನೀಡುವ ಸಹಾಯಧನವನ್ನು ಫಲಾನುಭವಿಗಳ ಖಾತೆಗೆ ಆನ್‍ಲೈನ್‍ ಮೂಲಕ ವರ್ಗಾವಣೆ ಮಾಡುವುದು ಈ ಯೋಜನೆಯ ವಿಶೇಷವಾಗಿದೆ ಎನ್ನುತ್ತಾರೆ ಇಕ್ರಂ.

ಕಳೆದ ವರ್ಷದ ಏಪ್ರಿಲ್‍ನಿಂದ ಈ ವರ್ಷ ಜನವರಿವರೆಗೆ ಜಿಲ್ಲೆಯ ನಿಗದಿಪಡಿಸಲಾಗಿದ್ದ 4750 ಮಂದಿ ಫಲಾನುಭವಿಗಳಿಗೆ ಎದುರಾಗಿ 7207 ಮಂದಿ ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ಮೂರು ಕಂತುಗಳಲ್ಲಿ ಒಟ್ಟು ₨2.66 ಕೋಟಿ ವಿತರಿಸಲಾಗಿದೆ ಎಂದು ಸಿ.ವಿ. ರಾಮನ್‍ ತಿಳಿಸಿದರು.


ಎಷ್ಟು ಸಹಾಯಧನ?

ಮೊದಲ ಪ್ರಸವದ ಗರ್ಭಿಣಿಯರಿಗೆ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಅರ್ಜಿ ಸಲ್ಲಿಸಲು ಯಾವುದೇ ಆದಾಯದ ಮಿತಿ ಇರುವುದಿಲ್ಲ. ಫಲಾನುಭವಿ ಸರ್ಕಾರಿ ನೌಕರರಾಗಿರಬಾರದು ಎಂಬ ನಿಬಂಧನೆಯಿದೆ. ಗರ್ಭ ಧರಿಸಿದ ಮೂರು ತಿಂಗಳೊಳಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಭರ್ತಿ ಮಾಡಿ ನೀಡಬೇಕು. ಅರ್ಹ ಗರ್ಭಿಣಿಯರಿಗೆ ಮೂರು ಹಂತದಲ್ಲಿ ನೇರವಾಗಿ ಅವರ ಖಾತೆಗೆ ಹಣ ಜಮೆ ಆಗುತ್ತದೆ. ಮೊದಲು ಮೂರು ತಿಂಗಳಲ್ಲಿ ತಲಾ ₹1 ಸಾವಿರ, ಆರು ತಿಂಗಳಾದಾಗ ₹2 ಸಾವಿರ ಮತ್ತು ಹೆರಿಗೆಯ ನಂತರ ₹2 ಸಾವಿರ ನೀಡಲಾಗುತ್ತದೆ.

***

ಸತತ ಏಳು ತಿಂಗಳು ರಾಮನಗರ ಈ ಸಾಧನೆ ಮಾಡಿದೆ. ಸರ್ಕಾರಿ ಸಿಬ್ಬಂದಿ ಪರಿಶ್ರಮ, ಜನರ ಸಹಕಾರದಿಂದ ಇದು ಸಾಧ್ಯವಾಗಿದೆ

- ಇಕ್ರಂ , ಜಿ.ಪಂ. ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT