ಕನಕಪುರ: ಕುಟುಂಬ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆ ಮಾಡಿದ ಅಪರಾಧಿಗೆ ಎರಡನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಹಾರೋಹಳ್ಳಿ ಚಾಮುಂಡೇಶ್ವರಿ ಬಡಾವಣೆ ನಿವಾಸಿ ಪ್ರಮೋದುಲ್ಲ ರಮೇಶ್ ಕುಮಾರ್ (24) ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಪತ್ನಿ ನೂಕುರತ್ನ (19) ಅವರನ್ನು 2020ರ ಆಗಸ್ಟ್ 14 ರಂದು ಕೊಲೆ ಮಾಡಿದ್ದ. ಹಾರೋಹಳ್ಳಿ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪಿ ವಿರುದ್ಧ ಸಾಕ್ಷ್ಯ ಸಾಬೀತುಯಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎಚ್.ಎನ್.ಕುಮಾರ್, ಆರೋಪಿ ಪ್ರಮೋದುಲ್ಲ ರಮೇಶ್ ಕುಮಾರ್ಗೆ ಜೀವಾವಧಿ ಶಿಕ್ಷೆ ವಿಧಿಸಿ, ₹50 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ರೂಪಲಕ್ಷ್ಮಿ ವಾದ ಮಂಡಿಸಿದ್ದರು.
ಘಟನೆ ವಿವರ: ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಮೋದುಲ್ಲ ರಮೇಶ್ ಕುಮಾರ್ ದಂಪತಿಯದ್ದು ಮೂಲತಃ ಆಂಧ್ರ ಪ್ರದೇಶ. ಮದುವೆಯಾಗಿ ಕೆಲಸಕ್ಕಾಗಿ ಹಾರೋಹಳ್ಳಿಗೆ ವಲಸೆ ಬಂದು ಚಾಮುಂಡೇಶ್ವರಿ ಬಡಾವಣೆ ಬಾಡಿಗೆ ಮನೆಯೊಂದರಲ್ಲಿ ದಂಪತಿ ವಾಸವಾಗಿದ್ದರು. ಗಂಡ–ಹೆಂಡತಿ ನಡುವೆ ಹೊಂದಾಣಿಕೆಯಿಲ್ಲದೆ ಪ್ರತಿ ದಿನ ಜಗಳ ನಡೆಯುತ್ತಿತ್ತು. 2020 ಆಗಸ್ಟ್ 14ರಂದು ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಲೆ ಮಾಡಿದ್ದ.