ಕುದೂರು: ಪಟ್ಟಣ ಮತ್ತು ಹೋಬಳಿಯಾದ್ಯಂತ ಬುಧವಾರ ನರಸಿಂಹ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಪುರಾಣ ಪ್ರಸಿದ್ಧ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಬುಧವಾರ ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ, ಸುದರ್ಶನ ನಾರಸಿಂಹ ಹೋಮ, ಪೂರ್ಣಾಹುತಿ ನಂತರ ಪ್ರಾಕಾರ ಉತ್ಸವ, ಮಹಾ ಮಂಗಳಾರತಿ, ನೆರೆದಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ದೇವಾಲಯದ ಸಮಿತಿ ವತಿಯಿಂದ ಮಾಡಲಾಗಿತ್ತು.
ಅದೇ ದಿನ ರಾತ್ರಿ ದೇವರ ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಹೋಬಳಿಯ ಪುರಾಣ ಪ್ರಸಿದ್ಧ ಸುಗ್ಗನಹಳ್ಳಿ (ಶುಕಪುರಿ) ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ಬುಧವಾರ ನರಸಿಂಹ ಜಯಂತಿಯನ್ನು ವಿಜೃಂಭಣೆಯಿಂದ ನಡೆಸಲಾಯಿತು. ದೇವರಿಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯದ ಆವರಣದಲ್ಲಿ ನಡೆದ ಕೆಂಕೆರೆ ಪಾಳ್ಯ ಗ್ರಾಮದ ಜೈ ಶ್ರೀ ರಾಮ್ ಮಹಿಳಾ ಚಂಡೆ ವಾದ್ಯ ಮತ್ತು ಬೆಂಗಳೂರಿನ ನಾಟ್ಯಭೈರವಿ ನೃತ್ಯ ಶಾಲೆಯ ಭರತನಾಟ್ಯ ಪ್ರದರ್ಶನ ಭಕ್ತರ ಗಮನ ಸೆಳೆಯಿತು.