ರಾಮನಗರ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ರಾಜೇಂದ್ರ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಗೂ ಜೀವಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ದುಷ್ಪರಿಣಾಮ ತಡೆಯಲು ಜಿಲ್ಲಾ ವ್ಯಾಪ್ತಿಯ ಪ್ರವಾಸಿ ಸ್ಥಳಗಳು ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಿಸಲಾಗಿದೆ. 1986ರ ಪರಿಸರ ಸಂರಕ್ಷಣೆ ಕಾಯ್ದೆ ಪ್ರಕಾರ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ಬ್ಯಾಗ್, ಕ್ಯಾರಿಬ್ಯಾಗ್, ಪೋಸ್ಟರ್, ಟೇಬಲ್ ಕವರ್, ಪ್ಲಾಸ್ಟಿಕ್ ಧ್ವಜ, ಪ್ಲಾಸ್ಟಿಕ್ ಥರ್ಮಾಕೋಲ್ ಬಳಸುವಂತಿಲ್ಲ. ಈ ಕಾನೂನು ಮೀರಿದರೆ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ನೈಸರ್ಗಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು, ಭಕ್ತರು ಪರಿಸರಕ್ಕೆ ಹಾನಿಯಾಗುವ ಪುನರ್ ಬಳಸಲು ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ಸೂಚಿಸಿದ್ದಾರೆ.
ರಾಮನಗರ ತಾಲ್ಲೂಕಿಗೆ ಸೇರಿದ ರಾಮದೇವರ ಬೆಟ್ಟ, ಹಂದಿಗುದಿ ಬೆಟ್ಟ, ಯತಿರಾಜಸ್ವಾಮಿ ಬೆಟ್ಟ, ಇಬ್ಬಳಿಕೆಹಳ್ಳಿ, ಜಾನಪದ ಲೋಕ, ಪವಿತ್ರವನ, ಕೂನಗಲ್ಲು ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟ, ವೀರಭದ್ರಸ್ವಾಮಿ ದೇವಸ್ಥಾನ, ಲಕ್ಷ್ಮೀ ನಾರಾಯಣಸ್ವಾಮಿ ಬೆಟ್ಟ, ಕೂಟಗಲ್ಲು ತಿಮ್ಮಪ್ಪನ ಬೆಟ್ಟ, ಜಲಸಿದ್ದೇಶ್ವರ ಬೆಟ್ಟ, ಪೀರಲ್ ಷಾವಲಿ ದರ್ಗಾ, ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ, ವಂಡರ್ಲಾ, ಇನೋವೆಟಿವ್ ಫಿಲ್ಮ್ ಸಿಟಿ, ಅರ್ಕೇಶ್ವರ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ರಂಗರಾಯನ ದೊಡ್ಡಿ ಕೆರೆ ಪ್ರದೇಶ, ಜಯಪುರ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ ನರಸಿಂಹ ಗುಡ್ಡ.
ಮಾಗಡಿ ತಾಲ್ಲೂಕಿಗೆ ಸೇರಿದ ಮಂಚನಬೆಲೆ ಜಲಾಶಯ, ಸಾವನ ದುರ್ಗ, ತಿರುಮಲ ರಂಗನಾಥ ಸ್ವಾಮಿ ದೇವಸ್ಥಾನ, ಮಾಗಡಿ ಸೋಮೇಶ್ವರ ದೇವಾಲಯ, ಕಲ್ಯ ಬೆಟ್ಟ ಹುಲಿಯೂರು ದುರ್ಗ ರಸ್ತೆ, ಕೆಂಚನಹಳ್ಳಿ ಶ್ರೀಲಕ್ಷ್ಮಿ ದೇವಾಲಯ, ಅಜ್ಜನಹಳ್ಳಿ ಕಾಡು ಸಿದ್ದೇಶ್ವರ ದೇವಾಲಯ, ಸೋಲೂರು ರೇಣುಕಾ ಯಲ್ಲಮ್ಮ ದೇವಾಲಯ, ಸುಗ್ಗನಹಳ್ಳಿ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ, ಮಾಗಡಿ ಕೋಟೆ, ಗುಡ್ಡದ ರಂಗನಾಥಸ್ವಾಮಿ ದೇವಾಲಯ.
ಚನ್ನಪಟ್ಟಣ ತಾಲ್ಲೂಕಿಗೆ ಸೇರಿದ ಕೆಂಗಲ್ ಆಂಜನೇಯ ಸ್ವಾಮಿ, ಕಣ್ವ ಜಲಾಶಯ, ದೇವರ ಹೊಸಹಳ್ಳಿ ಸಂಜೀವರಾಯ ಸ್ವಾಮಿ, ಬೇವೂರು ಸಿದ್ದರಾಮೇಶ್ವರ ಬೆಟ್ಟ, ಬೇವೂರು ತಿಮ್ಮಪ್ಪನ ಬೆಟ್ಟ, ದೊಡ್ಡ ಮಳೂರು ಅಪ್ರಮೇಯ ಸ್ವಾಮಿ, ಶ್ರೀ ಯೋಗಾ ನರಸಿಂಹ ಸ್ವಾಮಿ, ಗುಡ್ಡೆ ಬಸವೇಶ್ವರ ದೇವಾಲಯ, ಮಲೈ ಮಹದೇಶ್ವರ ದೇವಾಲಯ, ಗವಿ ರಂಗಸ್ವಾಮಿ ಬೆಟ್ಟ ಸಿಂಗರಾಜಿಪುರ.
ಕನಕಪುರ ತಾಲ್ಲೂಕಿಗೆ ಸೇರಿದ ಸಂಗಮ ಮತ್ತು ಮೇಕೆದಾಟು, ಅಚ್ಚಲು ದುರ್ಗ, ಕಬ್ಬಾಳಮ್ಮ ದೇವಾಲಯ ಮತ್ತು ಬೆಟ್ಟ, ಶಿವಗಿರಿ ಕ್ಷೇತ್ರ ಉಯ್ಯಂಬಳ್ಳಿ, ಚುಂಚಿ ಜಲಪಾತ ಏಳಿಗಳ್ಳಿ, ಚತುರ್ಭುಜ ಶ್ರೀ ಬೆಟ್ಟ, ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಕಲ್ಲಹಳ್ಳಿ, ಬಿಳಿಕಲ್ ರಂಗನಾಥಸ್ವಾಮಿ ಬೆಟ್ಟ, ಮೈತ್ರೇಯ ಪಿರಮಿಡ್ ವ್ಯಾಲಿ, ಲಕ್ಷ್ಮೀನರಸಿಂಹಸ್ವಾಮಿ ಬೆಟ್ಟ ಮುದವಾಡಿ, ಬಸವನಕುಪ್ಪೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯ, ತೋಪಗಾನಹಳ್ಳಿಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ, ಶಿವನಾಂಕರಿ ದೇವಾಲಯ ಸಂಗಮ ಪ್ರವಾಸಿ ತಾಣಗಳನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.