ರಾಮನಗರ: ತಾಲ್ಲೂಕಿನ ಸುಗ್ಗುನಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಸ್ಥಳಾಂತರ ವಿರೋಧಿಸಿ, ಗ್ರಾಮಸ್ಥರು ಮಂಗಳವಾರ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಸದ್ಯ ಗ್ರಾಮದ ಒಳ ಭಾಗದಲ್ಲಿರುವ ಖಾಸಗಿಯವರಿಗೆ ಸೇರಿದ ಕಟ್ಟಡದಲ್ಲಿರುವ ಬ್ಯಾಂಕ್ ಶಾಖೆಯನ್ನು ಗ್ರಾಮದ ವೃತ್ತಕ್ಕೆ ಸ್ಥಳಾಂತರಿಸಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಕಳೆದ 55 ವರ್ಷಗಳಿಂದಲೂ ಬ್ಯಾಂಕ್ ಇಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಕಾರಣವಿಲ್ಲದೆ ಬೊಮ್ಮಚ್ಚನಹಳ್ಳಿ ಗ್ರಾಮ ಸಮೀಪದ ಸುಗ್ಗನಹಳ್ಳಿ ವೃತ್ತಕ್ಕೆ ಬ್ಯಾಂಕ್ ಸ್ಥಳಾಂತರ ಮಾಡಲಾಗುತ್ತಿದೆ. ಆ ವೃತ್ತದಲ್ಲಿ ಮದ್ಯದ ಅಂಗಡಿಯಿದ್ದು, ಸುತ್ತಮುತ್ತಲು ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಪ್ರತಿಭಟನಾಕಾರರು ದೂರಿದರು.
ಅಂತಹ ಜಾಗಕ್ಕೆ ಬ್ಯಾಂಕ್ ಸ್ಥಳಾಂತರ ಮಾಡುವುದರಿಂದ ಏನಾದರೂ ಅನಾಹತುಗಳು ನಡೆಯುತ್ತವೆ. ಹಾಗಾಗಿ, ಯಾವುದೇ ಕಾರಣಕ್ಕೂ ಬ್ಯಾಂಕ್ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಗ್ರಾಮದ ಮುಖಂಡರಾದ ಬೈರೇಗೌಡ, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಧನಂಜಯ್ಯ, ರವಿ, ಶಿವರುದ್ರಯ್ಯ, ವಸಂತ, ಬೈರಪ್ಪ, ಮಹದೇವು ಸೇರಿದಂತೆ ಸ್ಥಳೀಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.