ಕನಕಪುರ: ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ಅಧಿಕಾರಿಗಳು ಮತ್ತು ನೌಕರರು ಆಡಳಿತ ಮಂಡಳಿ ನಂಬಿಕೆಗೆ ದ್ರೋಹ ಮಾಡಿರುವುದರಿಂದ ಲಾಭಾಂಶದಲ್ಲಿ ಹಣ ದುರ್ಬಳಕೆ ಆಗಿದೆ. ಆದರೆ, ಸಾರ್ವಜನಿಕರ ಠೇವಣಿ ಸುಭದ್ರವಾಗಿದೆ. ಗ್ರಾಹಕರು ಭಯಪಡುವ ಅಗತ್ಯವಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಅರ್ಬನ್ ಬ್ಯಾಂಕ್ನಲ್ಲಿ ಸೋಮವಾರ ನಡದ ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರು, ಬ್ಯಾಂಕ್ನ ಮೇಲೆ ಬಂದಿರುವ ಆರೋಪ ಕುರಿತು ಸ್ಪಷ್ಟನೆ ನೀಡಿದರು.
ಸಂಸ್ಥೆ 37ವರ್ಷಗಳಿಂದ ಉತ್ತಮ ಲಾಭಾಂಶದೊಂದಿಗೆ ಬ್ಯಾಂಕ್ ನಡೆಯುತ್ತಿದೆ. ತಾಲ್ಲೂಕಿನ ಜನರು ಬ್ಯಾಂಕ್ನ ಮೇಲೆ ವಿಶ್ವಾಸವಿಟ್ಟು ವ್ಯವಹಾರ ನಡೆಸಿಕೊಂಡು ಬಂದಿದ್ದಾರೆ. ಬ್ಯಾಂಕ್ ಸಿಇಒ, ಆಡಿಟರ್ ಜತೆ ಶಾಮೀಲಾಗಿ ಬ್ಯಾಂಕ್ನಲ್ಲಿ ತಮ್ಮದೇ ಠೇವಣಿ ಸೃಷ್ಟಿಸಿಕೊಂಡು ಇದಕ್ಕೆ ಶೇಕಡ 11ರಷ್ಟು ಬಡ್ಡಿ ಮತ್ತು ಶೂನ್ಯ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಿ ಸಂಸ್ಥೆಯನ್ನು ಲಾಭದಿಂದ ವಂಚಿಸಿದ್ದಾರೆ ಎಂದು ದೂರಿದರು.
ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ವ್ಯವಹಾರಕ್ಕೆ ಧಕ್ಕೆ ಆಗದಂತೆ ಆಡಳಿತ ಮಂಡಳಿ ಬದ್ಧವಾಗಿದೆ ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ರಾಮಚಂದ್ರ ಉಪಾಧ್ಯ, ನಿರ್ದೇಶಕರಾದ ಡಾ.ವಿಜಯಕುಮಾರ್, ತಿಮ್ಮೇಗೌಡ, ಎಂ.ಎಲ್.ಶಿವಕುಮಾರ್, ನಾ.ಚಿ.ನಾಗರಾಜು, ಶ್ರೀನಿವಾಸ್, ರಜಿನಿ, ಕಬ್ಬಾಳೇಗೌಡ, ಚೂಡಾಮಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.