ಕನಕಪುರ: ಪಡಿತರ ಕಾರ್ಡ್ನಲ್ಲಿ ಆಗಿರುವ ಲೋಪದೋಷ ಸರಿಪಡಿಸಲು ಮತ್ತು ಮೃತಪಟ್ಟವರ ಹೆಸರನ್ನು ತೆಗಿಸಲು ಆಹಾರ ಇಲಾಖೆಗೆ ಬಂದ ಜನರಿಗೆ ಕೆಲಸ ಮಾಡಿಕೊಡುವುದನ್ನು ಬಿಟ್ಟು ಕೆಲಸವನ್ನೇ ಸ್ಥಗಿತಗೊಳಿಸಿದ ಘಟನೆ ಕನಕಪುರ ಆಹಾರ ಇಲಾಖೆಯಲ್ಲಿ ಬುಧವಾರ ನಡೆಯಿತು.
ಸರ್ಕಾರವು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿರುವುದರಿಂದ ತಾಲ್ಲೂಕಿನ ಜನತೆ ರೇಷನ್ ಕಾರ್ಡ್ನಲ್ಲಿ ತಮ್ಮ ಹೆಸರು ಕೈ ಬಿಟ್ಟಿದ್ದರೆ ಸೇರಿಸುವುದು ಮತ್ತು ಕುಟುಂಬದ ಮುಖ್ಯಸ್ಥೆ ಮೃತಪಟ್ಟಿದ್ದರೆ ಅವರ ಹೆಸರನ್ನು ಡಿಲೀಟ್ ಮಾಡಿಸಲು ಆಹಾರ ಇಲಾಖೆಗೆ ಬರುತ್ತಿದ್ದಾರೆ.
ಕಚೇರಿಗೆ ಬಂದ ಜನರಿಗೆ ಸರಿಯಾದ ಮಾಹಿತಿ ನೀಡಿ ಅವರಿಂದ ಅರ್ಜಿ ಸ್ವೀಕರಿಸಬೇಕಾದ ಆಹಾರ ಇಲಾಖೆ ಇನ್ಸ್ಪೆಕ್ಟರ್ ಮನೋಹರ್ ಕಚೇರಿಯಲ್ಲಿ ಕಂಪ್ಯೂಟರ್ ಆಪ್ ಮಾಡಿಸಿ ಕೆಲಸವನ್ನೇ ಸ್ಥಗಿತಗೊಳಿಸಿದ್ದಾರೆ.
ಕೆಲಸ ಪ್ರಾರಂಭಿಸುವಂತೆ ಮನವಿ ಮಾಡಿದರೂ ಕೇಳದ ಅವರು ಗಂಟೆಗಟ್ಟಲೆ ಕೆಲಸ ಪ್ರಾರಂಭಿಸಿದೆ ಮೊಂಡುತನ ಪ್ರದರ್ಶಿಸಿದ್ದಾರೆ.
ಸಾಲಿನಲ್ಲಿ ನಿಂತಿದ್ದವರು ಮೊದಲೆ ಸರ್ವರ್ ಸಮಸ್ಯೆ ಎಂದು ಹೇಳುತ್ತಿದ್ದೀರಿ. ಈಗ ನೀವೇ ಕೆಲಸ ನಿಲ್ಲಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇಲ್ಲಿ ಅಧಿಕಾರಿ ನಾನಾ, ನೀನಾ ಎಂದು ಮನೋಹರ್ ಗದರಿದ್ದಾರೆ. ಕೊನೆಗೆ ಎಲ್ಲರೂ ಕಚೇರಿಯಿಂದ ಹೊರಗಡೆ ನಿಂತರು.
ಕೊನೆಗೆ ಸಾಲಿನಲ್ಲಿ ನಿಂತಿದ್ದ ಜನರಿಂದ ಅರ್ಜಿ ಪಡೆದು ಎಲ್ಲರನ್ನು ಕಳುಹಿಸಿದ್ದಾರೆ. ತಾಲ್ಲೂಕಿನ ಗಡಿ ಭಾಗದಿಂದ ಬಂದಿದ್ದ ಜನರು ಅರ್ಜಿ ಕೊಟ್ಟು ಊರಿಗೆ ವಾಪಸ್ಸಾದರು.
ಟೋಕನ್ ಕೊಟ್ಟರೆ ಬಂದು ಅರ್ಜಿ ಕೊಟ್ಟು ಕೆಲಸ ಮಾಡಿಕೊಳ್ಳುತ್ತೇವೆ. ಸರಿಯಾದ ಮಾಹಿತಿ ನೀಡಿದೆ ಅಧಿಕಾರಿ ತೊಂದರೆ ಕೊಡುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಗಮನ ಹರಿಸಿ ಸಾರ್ವಜನಿಕರಿಗೆ ಸ್ಪಂದಿಸಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ.