ರಾಮನಗರ: ಕೋವಿಡ್ನಿಂದ ಸಂಕಷ್ಟದಲ್ಲಿರುವ ಕಲಾವಿದರಿಗೆ ರಾಜ್ಯ ಸರ್ಕಾರ ₹ 3 ಸಾವಿರ ಸಹಾಯಧನ ನೀಡುತ್ತಿರುವುದು ಸ್ವಾಗತ. ಆದರೆ, ಇದಕ್ಕೆ ವಿಧಿಸಿರುವ ವಯಸ್ಸಿನ ಮಿತಿಯನ್ನು ತೆಗೆಯಬೇಕು ಎಂದು ರಾಮನಗರ ಜಿಲ್ಲಾ ಜಾನಪದ ಕಲಾವಿದರ ಸಂಘದ ಅಧ್ಯಕ್ಷ ಕೂಟಗಲ್ ಆಗ್ರಹಿಸಿದರು.
ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಸರ್ಕಾರದ ಸಹಾಯಧನ ಪಡೆಯಲು ಕೆಲವೊಂದು ಮಾನದಂಡಗಳನ್ನು ಸರ್ಕಾರ ಜಾರಿಗೆ ತರಲಾಗಿದೆ. ಅದರಲ್ಲಿ 35 ವರ್ಷ ಮೇಲ್ಪಟ್ಟ ಕಲಾವಿದರು ಈ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಈ ಆದೇಶದಿಂದಾಗಿ 18 ವರ್ಷದಿಂದ 34 ವಯಸ್ಸಿನ ಯುವ ಕಲಾವಿದರಿಗೆ ಸಹಾಯಧನ ಕೈ ತಪ್ಪಲಿದೆ’ ಎಂಬ ಆತಂಕ ವ್ಯಕ್ತಪಡಿಸಿದರು.
ಸಹಾಯಧನ ಪಡೆಯವ ಕಲಾವಿದರು ಕಡ್ಡಾಯವಾಗಿ ಕೊರೊನಾ ಲಸಿಕೆ ತೆಗೆದುಕೊಂಡಿರಬೇಕು ಎಂಬ ಆದೇಶ ಹೊರಡಿಸಲಾಗಿದೆ. ಆದರೆ, 45 ವರ್ಷ ಮೇಲ್ಪಟ್ಟ ಕಲಾವಿದರಿಗೇ ಲಸಿಕೆ ಸಿಕ್ಕಿಲ್ಲ. ಈ ನಿಯಮ ಕೈಬಿಡಬೇಕು ಎಂದರು.
ಗ್ರಾಮೀಣ ಯುವ ಕಲಾವಿದರು ಯಾವುದೇ ಪ್ರದರ್ಶನ ಸಿಗದೇ ಸಂಕಷ್ಟದಲ್ಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಧ್ಯಪ್ರವೇಶಿಸಿ 18 ವರ್ಷ ಮೇಲ್ಪಟ್ಟ ಎಲ್ಲಾ ಕಲಾವಿದರಿಗೂ ಸಹಾಯಧನ ತಲುಪುವಂತೆ ಮಾಡಬೇಕು ಎಂದು ಕೋರಿದರು.
ಸಂಘದ ಗೌರವಾಧ್ಯಕ್ಷ ಪೂಜೆ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಚ್. ಪುಟ್ಟರಾಜು, ಖಜಾಂಚಿ ಜಗದೀಶ್ ಕುಮಾರ್, ನಿರ್ದೇಶಕ ಶ್ರೀನಿವಾಸ್ ಇದ್ದರು.