ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ ರಥೋತ್ಸವಕ್ಕೆ ಸಕಲ ಸಿದ್ಧತೆ

14ರಂದು ತೇರು: ಆರು ದಿನ ಕಾಲ ವಿವಿಧ ಕಾರ್ಯಕ್ರಮ
Last Updated 11 ಏಪ್ರಿಲ್ 2019, 16:59 IST
ಅಕ್ಷರ ಗಾತ್ರ

ರಾಮನಗರ: ನಗರದಲ್ಲಿ ಇದೇ 14ರಂದು ನಡೆಯಲಿರುವ ಶ್ರೀರಾಮ ರಥೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.

‘ರಾಮದೇವರಬೆಟ್ಟದಲ್ಲಿ ನೆಲೆಸಿರುವ ಶ್ರಿರಾಮ ದೇವರಿಗೆ ಇಲ್ಲಿನ ಛತ್ರದ ಬೀದಿಯಲ್ಲಿ ಪ್ರತಿ ವರ್ಷದ ಪದ್ಧತಿಯ ಪ್ರಕಾರ ವಿಕಾರಿ ನಾಮ ಸಂವತ್ಸರದ ಚೈತ್ರ ಶುದ್ದ ದಶಮಿ ಭಾನುವಾರದಂದು ಬೆಳಿಗ್ಗೆ 9.45 ರಿಂದ 10.45 ಗಂಟೆಯೊಳಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಮಹಾ ರಥೋತ್ಸವ ನಡೆಯಲಿದೆ’ ಎಂದು ದೇವಾಲಯದ ಪ್ರಧಾನ ಅರ್ಚಕ ಎ. ನರಸಿಂಹಭಟ್ಟ 'ಪ್ರಜಾವಾಣಿ'ಗೆ ತಿಳಿಸಿದರು.

ಪಾಂಚರಾತ್ರೋಕ್ತ ಆಗಮಾನುಸಾರವಾಗಿ ಇದೇ 6 ರಿಂದ ಮೇ 9 ರವರೆಗೆ ನವಾಹೋತ್ಸವ ಪೂರ್ವಕ ಸೇವಾ ಕೈಂಕರ್ಯಗಳು ನಡೆಯಲಿವೆ. ಶ್ರೀರಾಮ ರಥೋತ್ಸವಕ್ಕೆ 500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ರಾಮದೇವರ ಬೆಟ್ಟದಲ್ಲಿ ಕಳೆದ 50 ವರ್ಷಗಳ ಹಿಂದೆ ವಿಗ್ರಹಗಳ ಕಳ್ಳತನವಾದ್ದರಿಂದ ನಗರದಲ್ಲಿ 1971ರಲ್ಲಿ ಶ್ರೀರಾಮ ದೇವಾಲಯವನ್ನು ಸ್ಥಾಪಿಸಲಾಯಿತು ಎಂದು ಹೇಳಿದರು.

ರಥವು 36 ಅಡಿ ಎತ್ತರವಿದೆ. ನಾನಾ ಜಿಲ್ಲೆಗಳಿಂದ ರಥೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರು ರಥಕ್ಕೆ ಜವನ ಮತ್ತು ಬಾಳೆ ಹಣ್ಣು ಎಸೆದು ಹರಕೆ ತೀರಿಸಿಕೊಳ್ಳಲಿದ್ದಾರೆ. ರಾಮನಗರದಲ್ಲಿ ಪ್ರತಿ ವರ್ಷ ಶ್ರೀರಾಮ ನವಮಿಯ ಮರುದಿನ ಶ್ರೀರಾಮ ರಥೋತ್ಸವ ಮತ್ತು ಜಾತ್ರೆ ವಿಜೃಂಬಣೆಯಿಂದ ನಡೆಯುತ್ತದೆ ಎಂದು ಅವರು ಹೇಳಿದರು.

ರಾಮಾನುಜಚಾರ್ಯರು ಪ್ರತಿಷ್ಠಾಪಿಸಿದ ಮೂರ್ತಿ: ರಾಮದೇವರ ಬೆಟ್ಟದಲ್ಲಿ ರಾಮಾನುಜ ಚಾರ್ಯರು ರಾಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಇಲ್ಲಿಗೆ ರೇವಣಸಿದ್ದೇಶ್ವರರು ಭೇಟಿ ನೀಡಿದ್ದರು. ಈ ಪ್ರದೇಶವನ್ನು ಗಂಗರು, ರಾಷ್ಟ್ರಕೂಟರು, ಹೊಯ್ಸಳರು, ಚೋಳರು, ವಿಜಯನಗರದ ಅರಸರು ಆಳ್ವಿಕೆ ಮಾಡಿದ್ದಾರೆ. 1537ರಲ್ಲಿ ಹಿರಿಯ ಕೆಂಪೇಗೌಡ ಬೆಂಗಳೂರು ನಿರ್ಮಾಣಕ್ಕೆ ಮುಂದಾಗುತ್ತಾನೆ. ರಾಮದೇವರ ಬೆಟ್ಟದಲ್ಲಿ ಈತನಿಗೆ ನಿಧಿ ದೊರೆಯುತ್ತದೆ. ಇದನ್ನು ಬೆಂಗಳೂರು ಅಭಿವೃದ್ಧಿಗಾಗಿ ಬಳಸುತ್ತಾನೆ. ಇದಕ್ಕೆ ಸಂಬಂಧಿಸಿದಂತೆ ಬೆಟ್ಟದಲ್ಲಿ ಶಾಸನಗಳಿವೆ ಎಂದು ಹಿರಿಯ ಸಂಶೋಧಕ ಡಾ.ಎಂ.ಜಿ. ನಾಗರಾಜ್ ತಿಳಿಸಿದರು.

ಹಿಂದೆ ‘ಕ್ಲೋಸ್‌ ಪೇಟೆ’ ಎಂದು ಕರೆಯಲ್ಪಡುತ್ತಿದ್ದ ಈ ನಗರ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಕೆಳ್ಗಲಿ ನಾಡು, ಕಿಳಲೈ ನಾಡು, ಹೊಸಪೇಟೆ, ನವೀನಪೇಟೆ, ರಾಮಗಿರಿ, ರಾಮದುರ್ಗ ಮೊದಲಾದ ಹಲವು ಹೆಸರುಗಳಿಂದ ಗುರುತಿಸಲ್ಪಟ್ಟಿತ್ತು. ರಾಮದೇವರ ಬೆಟ್ಟದಲ್ಲಿ ಶ್ರೀರಾಮನು ಸೀತೆ-ಲಕ್ಷ್ಮಣರೊಡನೆ ವನವಾಸ ಕಾಲದಲ್ಲಿ ನೆಲೆಸಿದ್ದನೆಂದು ಪ್ರತೀತಿಯಿದೆ. ಈ ಪ್ರತೀತಿಯೇ ಕ್ಲೋಸ್‌ ಪೇಟೆಯು ‘ರಾಮನಗರ’ ಎಂದು ಮರುನಾಮಕರಣ ಹೊಂದಲು ಪ್ರೇರಣೆಯಾಗಿದೆ ಎಂದರು.

ರಾಮದೇವರ ಬೆಟ್ಟದಲ್ಲಿ ಬೃಹತ್‌ ಶಿಲಾಯುಗದ ಸಮಾಧಿಗಳಿವೆ. ಪ್ರಾಗೈತಿಹಾಸಿಕ ಗೋರಿಗಳಿವೆ. ಹಲವು ಶಾಸನಗಳಿವೆ. ಇವುಗಳನ್ನು ಅಧ್ಯಯನ ಮಾಡಿದರೆ ರಾಮನಗರ ಜಿಲ್ಲೆಯ ಇತಿಹಾಸವನ್ನು ಪ್ರಾಗೈತಿಹಾಸಿಕ ನೆಲೆಯಲ್ಲಿ ವಿಶ್ಲೇಷಿಸಬಹುದು ಎಂದು ಅವರು ಹೇಳಿದರು.

ಆರು ದಿನಗಳ ಕಾರ್ಯಕ್ರಮ: ಇದೇ 15 ರಿಂದ 20ರ ವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ಭಗವನ್ನಾಮ ಸಂಕೀರ್ತನೆ, ಹರಿಕತೆ, ಭರತನಾಟ್ಯ ಹಾಗೂ ದೇವರ ನಾಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜತೆಗೆ ಸಾಧಕರನ್ನು ಗೌರವಿಸಲಾಗುತ್ತದೆ ಎಂದು ಶ್ರೀರಾಮೋತ್ಸವ ಸಂಕೀರ್ತನಾ ಸೇವಾ ಟ್ರಸ್ಟಿನ ಎಚ್.ವಿ. ಶೇಷಾದ್ರಿ ಐಯ್ಯರ್ ತಿಳಿಸಿದರು.

ಇದೇ 15 ರಂದು ಸಂಜೆ 7 ಗಂಟೆಗೆ ಹಿರಿಯ ಕಲಾವಿದ ಸೀತರಾಮ ಮುನಿಕೋಟಿ ಅವರಿಂದ 'ಭಕ್ತ ಮಹರ್ಷಿ ವಾಲ್ಮೀಕಿ' ಹರಿಕತೆ, 16ರಂದು ಗಾಯಕ ಬಿ.ಪಿ. ರೇಣುಕಪ್ಪ ಮತ್ತು ತಂಡದವರಿಂದ ವಚನ ಗಾಯನ, ಭಗವನ್ನಾಮ ಸಂಕೀರ್ತನೆ, 17ರಂದು ಕಲಾವಿದೆ ಸಾವಿತ್ರಿರಾವ್ ಮತ್ತು ತಂಡದವರಿಂದ ಭಕ್ತಿಗೀತೆಗಳ ಗಾಯನ, ಇದೇ 18ರಂದು ಚೈತನ್ಯ ಕಲಾಸಂಗಮ ತಂಡದವರು ದೇವರನಾಮಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ತಿಳಿಸಿದರು.

ಇದೇ 19ರಂದು ಸಪ್ತ ಸ್ವರ ಸಂಗೀತ ವಿದ್ಯಾಲಯದ ಕಲಾವಿದರಿಂದ ಕರ್ನಾಟಕ ಸಂಗೀತ, 20ರಂದು ಶಾಂತಲಾ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಭರತ ನಾಟ್ಯ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.


ಪಾನೀಯದಲ್ಲಿ ಆರೋಗ್ಯದ ಗುಟ್ಟು
ಶ್ರೀರಾಮದೇವರ ರಥೋತ್ಸವಕ್ಕೆ ನಾಡಿನ ಬೇರೆ ಬೇರೆ ಭಾಗಗಳಿಂದ ಜನ ಬಂದು ಸೇರುತ್ತಾರೆ. ನಗರದಲ್ಲಿ ಅಲ್ಲಲ್ಲಿ ತೆರೆಯಲಾಗುವ ಅರವಟ್ಟಿಗೆಗಳಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ಸವಿದು ಸಂಭ್ರಮಿಸುತ್ತಾರೆ. ಹಾಗಾಗಿಯೇ ಈ ಜಾತ್ರೆಗೆ ಪೌರಾಣಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ ಎಂದು ಜಾನಪದ ವಿದ್ವಾಂಸ ಡಾ. ಕುರುವ ಬಸವರಾಜ್ ಹೇಳಿದರು.

ಬೇಸಿಗೆ ಬಂತಂದೆರೆ ಹಬ್ಬ ಹರಿದಿನಗಳು ಕೊಂಡ, ಉತ್ಸವಗಳು ಎಲ್ಲೆಡೆ ಜರುಗುತ್ತಿರುತ್ತವೆ. ಈ ಸಮಯದಲ್ಲಿ ಜನರು ಎಲ್ಲಡೆ ಸಾಮಾನ್ಯವಾಗಿ ಬಳಸುವ ಬೇಲದ ಹಣ್ಣಿನ ಪಾನಕ, ಕೋಸಂಬರಿ ಪಾಯಿಸ ಮಜ್ಜಿಗೆಯನ್ನು ಹೆಚ್ಚಾಗಿ ಬಳಸುವ ಪದ್ಧತಿಯು ಅವರ ಆರೋಗ್ಯದ ಗುಟ್ಟುಗಳಲ್ಲಿ ಒಂದು ಎಂದು ತಿಳಿಸಿದರು.

ಬೇಸಿಗೆಯ ತಾಪಕ್ಕೆ ಸಕ್ಕರೆ ಪ್ರಮಾಣದ ಸಮತೋಲನಕ್ಕಾಗಿ ಪಾನಕ ಪಾಯಿಸ ಉತ್ತಮ ಪೇಯ. ಹಸಿವು ಬಾಯಾರಿಕೆ ನೀಗಲು ಮಜ್ಜಿಗೆ ಕೋಸಂಬರಿ ಉತ್ತಮ ಆಹಾರ. ಇದರಲ್ಲಿ ಕಾರ್ಬೋಹೈಡ್ರೇಟ್ ಅಂಶಗಳು ಹೆಚ್ಚಾಗಿರುತ್ತವೆ.ಇವು ನಮ್ಮ ಜನಪದರಿಗಿದ್ದ ಆಹಾರಜ್ಞಾನವಾಗಿದೆ ತಿಳಿಸದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT