ರಾಮನಗರ: ಭಾರತೀಯ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ಮಾಡುವ ದಿಕ್ಕಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಭಾರತ್ ವಿಕಾಸ ಪರಿಷತ್ ನ ಪ್ರಾಂತ ಮಾರ್ಗದರ್ಶಕ ದೌಲತ್ ರಾವ್ ಹೇಳಿದರು.
ಇಲ್ಲಿನ ಬ್ಲಾಸಂ ಇಂಟರ್ ನ್ಯಾಷನಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಭಾರತ್ ವಿಕಾಸ ಪರಿಷತ್ ವತಿಯಿಂದ ಭಾನುವಾರ ಪ್ರಾಂತಮಟ್ಟದ ಭಾರತ್-ಕೋ-ಜಾನ್ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಂಸ್ಕೃತಿ ಮಾತ್ರ ಯಾವುದೇ ತಾಂತ್ರಿಕತೆಯಿಂದಲೂ ತನ್ನತನ ಕಳೆದುಕೊಳ್ಳುವುದಿಲ್ಲ. ದುರಂತದ ಸಂಗತಿ ಎಂದರೆ ಬೇರೆ ದೇಶದ ನಾಗರಿಕರು ಭಾರತದ ಸಂಸ್ಕೃತಿಯನ್ನು ಗೌರವಿಸಿ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಭಾರತದಲ್ಲಿ ಹುಟ್ಟಿದವರು ನಮ್ಮ ಸಂಸ್ಕೃತಿಗೆ ಸೆಡ್ಡು ಹೊಡೆದು ಪಾಶ್ಚಾತ್ಯ ಸಂಸ್ಕೃತಿ ಅಳವಡಿಕೆಗೆ ಮುಂದಾಗಿರುವುದು ತಲೆತಗ್ಗಿಸುವ ಸಂಗತಿ. ನಮ್ಮ ದೇಶದ ವೈವಿಧ್ಯತೆ ತಿಳಿಯುವ ನಿಟ್ಟಿನಲ್ಲಿ ಭಾರತ್ ಕೋ ಜಾನೋ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ’ ಎಂದರು.
ಮೈಸೂರು ಪ್ರಾಂತ ಸಂಚಾಲಕ ಡಿ.ಪಿ. ಸ್ವಾಮಿ ಮಾತನಾಡಿ, ‘ನಾಡಿನ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡುವ ನಿಟ್ಟಿನಲ್ಲಿ ಶಾಲಾಕಾಲೇಜು ಹಂತದಲ್ಲಿ ರಸಪ್ರಶ್ನೆಯ ಮಾದರಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು. ವೈವಿದ್ಯತೆಯಲ್ಲಿ ಏಕತೆ ಸಾರುವ ದೇಶದ ಹಿರಿಮೆ ಗರಿಮೆ ಬಗ್ಗೆ ಯುವ ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕು’ ಎಂದರು.
ಭಾರತ್ ವಿಕಾಸ ಪರಿಷತ್ ವಾಲ್ಮೀಕಿ ಶಾಖೆ ಅಧ್ಯಕ್ಷ ಅಂಬರೀಶ್, ಕಾರ್ಯದರ್ಶಿ ಸಿ.ರಮೇಶ್ ಹೊಸದೊಡ್ಡಿ, ಗೌರವಾಧ್ಯಕ್ಷ ಎಚ್.ವಿ. ಶೇಷಾದ್ರಿ ಅಯ್ಯರ್, ಪದಾಧಿಕಾರಿಗಳಾದ ಹೇಮಾವತಿ ಅಂಬರೀಷ್, ಕೆ.ಎಲ್. ಶೇಷಗಿರಿರಾವ್, ರಾ.ಶಿ. ಬಸವರಾಜು, ಪುಷ್ಪಲತಾ, ಇಂದುಮತಿ, ಜಯಕೀರ್ತಿ, ಪ್ರಭು, ಬಾಲಕೃಷ್ಣ, ಕೆಂಪೇಗೌಡ, ಪರಮಶಿವಯ್ಯ, ಕ್ವಿಜ್ ಮಾಸ್ಟರ್ ಕೆ.ಎನ್. ರಾಮರಾಜೇ ಅರಸ್, ಬ್ಲಾಸಂ ಇಂಟರ್ ನ್ಯಾಷನಲ್ ಇಂಗ್ಲಿಷ್ ಮಾಧ್ಯಮ ಶಾಲೆಯ ಇಶಾಂತ್ ಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.