ಕೋಡಿಹಳ್ಳಿ (ಕನಕಪುರ): ಕುಟುಂಬದ ಸದಸ್ಯರಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸಲು ಹಾಗೂ ಸಮಾಜದಲ್ಲಿ ರೂಡಿಯಲ್ಲಿರುವ ಹಬ್ಬ ಆಚರಣೆಗಳನ್ನು ಪರಿಚಯಿಸಲು ಶಾಲೆಗಳಲ್ಲಿ ಸೂಪರ್ ಸ್ಯಾಟರ್ಡೇ (ಅದ್ಭುತ ಶನಿವಾರ) ಕಾರ್ಯಕ್ರಮ ಸಹಕಾರಿ’ ಎಂದು ಸರ್ಕಾರಿ ಶಾಲೆ ಶಿಕ್ಷಕಿ ಸೌಭಾಗ್ಯಮ್ಮ ತಿಳಿಸಿದರು.
ಇಲ್ಲಿನ ಕೋಡಿಹಳ್ಳಿ ಹೋಬಳಿ ಪ್ಲಾಂಟೇಷನ್ ಬಳಿಯಿರುವ ಡಿಕೆಎಸ್ ಹಿಪ್ಪೋ ಕ್ಯಾಂಪಸ್ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ಶನಿವಾರ ಆಯೋಜನೆ ಮಾಡಿದ್ದ ಸೂಪರ್ ಸ್ಯಾಟರ್ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶಕ್ಕಾಗಿ ಶ್ರಮಿಸಿದ ಮಹಾತ್ಮರು, ಪೂಜ್ಯರ ಬಗ್ಗೆ ಮಕ್ಕಳಿಗೆ ನಾವು ಚಿಕ್ಕಂದಿನಿಂದಲೇ ತಿಳಿಸಿಕೊಡಲು ಜಯಂತಿ ಕಾರ್ಯಕ್ರಮ, ಅದೇ ರೀತಿ ಧಾರ್ಮಿಕ ಹಬ್ಬಗಳ ಆಚರಣೆಗಳನ್ನು ಮಾಡಿ ಅವುಗಳನ್ನು ಪರಿಚಯಿಸಿ ಕೊಡಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇವೆಲ್ಲವೂ ಸಹಕಾರಿಯಾಗಲಿವೆ’ ಎಂದರು.
ಕ್ರಿಸ್ಮಸ್ ಹಬ್ಬದ ನೃತ್ಯ ಪ್ರದರ್ಶನ ನಡೆಯಿತು. ಶಿಕ್ಷಕ ಉನ್ನೀಸ್ ಎಂ. ಸೋಮನ್ ಸಾಂತಾಕ್ಲಾಸ್ ವೇಷಧರಿಸಿ ಮಕ್ಕಳನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ತಾಯಿ ಮಮತೆಯ ಪರಿಚಯವಾಗಿ ‘ತಾಯಿಯ ಕೈ ತುತ್ತು’ ಎಂಬ ಕಾರ್ಯಕ್ರಮದಡಿ ತಾಯಂದಿರು ಮಕ್ಕಳಿಗೆ ಕೈ ತುತ್ತು ನೀಡಿದರು.
ಕೋಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಮುಖಂಡ ಮಹೇಶ್ ಕೆ.ಎಸ್., ತರಬೇತುದಾರರಾದ ರಾಧಾ, ಮುಖ್ಯ ಶಿಕ್ಷಕಿ ಆಂತೋಣಿ ಮೇರಿ, ಸಹ ಶಿಕ್ಷಕಿ ವೀಣಾ, ಆಶಾ, ಅಶ್ವಿನಿ, ಸುಮಿತ್ ಇದ್ದರು.