ಮಾಗಡಿ: ಕನಕಪುರ ತಾಲ್ಲೂಕಿನಲ್ಲಿ ಮೆಗಾಡೇರಿ ಸ್ಥಾಪನೆ ಮಾಡುವ ಮೂಲಕ ರೈತರ ಬದುಕಿಗೆ ನೆರವಾಗಿರುವ ಸಂಸದ ಡಿ.ಕೆ.ಸುರೇಶ್ ಮತ್ತೊಮ್ಮೆ ಲೋಕಸಭೆಗೆ ಆಯ್ಕೆಯಾಗುವುದು ಖಚಿತ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಿಡದಿ, ಕೂಟಗಲ್ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮಾರ್ಚ್ 21ರಂದು ಮಧ್ಯಾಹ್ನ 2ಕ್ಕೆ ಬಿಡದಿಯ ಮಾಂಗೋಲಿಯ ರೆಸಾರ್ಟ್ನಲ್ಲಿ ಕರೆಯಲಾಗಿದೆ. ಪಟ್ಟಣದ ಕಲ್ಯಾಬಾಗಿಲು ಸಿದ್ಧಾರೂಢಾಶ್ರಮದಲ್ಲಿ ಮಾರ್ಚ್ 22ರಂದು ಮಧ್ಯಾಹ್ನ 2ರಿಂದ 5 ಗಂಟೆಯ ವರೆಗೆ ಕುದೂರು, ತಿಪ್ಪಸಂದ್ರ, ಕಸಬಾ, ಮಾಡಬಾಳ್ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ತಿಳಿಸಿದರು.
ಸಂಸದ ಡಿ.ಕೆ. ಸುರೇಶ್, ಸಚಿವ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ. ರೇವಣ್ಣ, ಸಿ.ಎಂ.ಲಿಂಗಪ್ಪ, ಎಸ್.ರವಿ, ಕಾಂಗ್ರೆಸ್ ಮುಖಂಡ ಎಚ್.ಸಿ. ಬಾಲಕೃಷ್ಣ ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಸಿ.ಜಯರಾಮು ಮಾತನಾಡಿ, ‘ದೇಶದಲ್ಲಿ ನರೇಗಾ ಯೋಜನೆಯನ್ನು ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿರುವುದರಲ್ಲಿ ಸಂಸದ ಡಿ.ಕೆ.ಸುರೇಶ್ ಮೊದಲಿಗರಾಗಿದ್ದಾರೆ. ಅವರನ್ನು ನಾವೆಲ್ಲರೂ ಭಾರಿ ಬಹುಮತದಿಂದ ಇನ್ನೊಮ್ಮೆ ಆಯ್ಕೆ ಮಾಡಬೇಕಿದೆ’ ಎಂದರು.
ಕಾಂಗ್ರೆಸ್ ಮುಖಂಡರಾದ ಕೆ.ಎಚ್. ಕೃಷ್ಣಮೂರ್ತಿ, ತಮ್ಮಣ್ಣಗೌಡ, ತೇಜಸ್ ಕುಮಾರ್, ವಿಜಯ ಕುಮಾರ್, ಎಚ್.ಜೆ.ಪುರುಷೋತ್ತಮ್, ಗುರು, ಬಸವರಾಜು ಈಡಿಗ, ಅಗಲಕೋಟೆ ರಾಮಣ್ಣ ಈಡಿಗ ಇದ್ದರು.