ಚನ್ನಪಟ್ಟಣ: ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಮನೆಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಗ್ರಿ, ನಗದು ದೋಚಿ ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ಗ್ರಾಮದ ಎಚ್.ಎನ್. ಶಿವಕುಮಾರ್ ಎಂಬುವರ ತೋಟದ ಮನೆಯಲ್ಲಿ ಈ ಕಳವು ನಡೆದಿದ್ದು, ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯಲ್ಲಿ ಮನೆಯ ಬಾಗಿಲು ಒಡೆದು ಒಳ ನುಗ್ಗಿರುವ ಕಳ್ಳರು ಈ ಕೃತ್ಯವೆಸಗಿದ್ದಾರೆ. ಮನೆಯವರೆಲ್ಲರೂ ಕಾರ್ಯ ನಿಮಿತ್ತ ಹೊರಗೆ ಹೋಗಿದ್ದ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಬೀರುವಿನಲ್ಲಿದ್ದ ಬೆಳ್ಳಿ ಚೆಂಬು, ಬೆಳ್ಳಿ ತಟ್ಟೆ, ಎರಡು ಬೆಳ್ಳಿ ದೀಪದ ಕಂಬಗಳು, ಆರು ಜೊತೆ ಚಿನ್ನದ ಓಲೆ, 8 ರೇಷ್ಮೆಸೀರೆಗಳು, ಒಂದು ಹಿತ್ತಾಳೆ ಹಂಡೆ, ಅಡುಗೆ ಮನೆಯಲ್ಲಿದ್ದ ಒಂದು ಗ್ಯಾಸ್ ಸಿಲಿಂಡರ್ ಹಾಗೂ ₹ 35 ಸಾವಿರ ನಗದು ದೋಚಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.