ಮಾಗಡಿ: ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವೆ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ, ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.
ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜೀವನ್ರಾವ್ ವಸಂತರಾವ್ ಕುಲಕರ್ಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ, ಸಾಮಾಜಿಕ ನ್ಯಾಯ ಎಂದರೆ ಸಮಾಜದಲ್ಲಿರುವ ಎಲ್ಲ ರೀತಿಯ ಅಸಮಾನತೆ ಹೋಗಲಾಡಿಸಿ ಹಿಂದುಳಿದವರು, ಬಡವರು, ದುರ್ಬಲರು, ತುಳಿತಕ್ಕೆ ಮತ್ತು ಶೋಷಣಗೆ ಒಳಪಟ್ಟ ಅಸಹಾಯಕರನ್ನು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಮೇಲೆತ್ತಲು ಯೋಜನೆ ರೂಪಿಸಿ ಜಾರಿಗೊಳಿಸಲಾಗಿದೆ ಎಂದರು.
ಸಮಾಜದಲ್ಲಿ ಸಂಪತ್ತು ಮತ್ತು ಅವಕಾಶ ಹಾಗೂ ಸವಲತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕಿದೆ. ಬಣ್ಣ, ಲಿಂಗ, ಜಾತಿ, ಅಂಗವಿಕಲರು ಮತ್ತು ಧರ್ಮದ ಆಧಾರದಲ್ಲಿ ಜನರನ್ನು ದೂರ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧ ಎಂದರು.
ಅಸಮಾನತೆ, ವರ್ಣಭೇದ ನೀತಿ ವಿರುದ್ಧ ಮಹಾತ್ಮಗಾಂಧೀಜಿ ಅಂದಿನಿಂದಲೇ ಉಪವಾಸ ಸತ್ಯಾಗ್ರಹ ಮೂಲಕ ಸಾಮಾಜಿಕ ನ್ಯಾಯ, ಸಮ ಸಮಾಜದ ನಿರ್ಮಾಣಕ್ಕೆ ಪಣತೊಟ್ಟಿದ್ದರು ಎಂದರು.
ಪ್ರಭಾರ ಮುಖ್ಯಶಿಕ್ಷಕ ಮಹೇಶ್.ಪಿ.ಎಸ್.ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕುಮಾರ್, ರಜನಿ, ರಮ್ಯ, ಪೂರ್ಣಿಮಾ ಸಾಮಾಜಿಕ ನ್ಯಾಯ ದಿನಾಚರಣೆ ಕುರಿತು ಮಾತನಾಡಿದರು. ನ್ಯಾಯಾಧೀಶರು ಮಕ್ಕಳೊಂದಿಗೆ ಸಂವಾದ ನಡೆಸಿದರು.
ನ್ಯಾಯಲಯದ ಸಿಬ್ಬಂದಿ ರಮ್ಯ, ಅಕ್ಷರ ದಾಸೋಹದ ಸಿಬ್ಬಂದಿ ಇದ್ದರು.