ಕನಕಪುರ: ತಾಲ್ಲೂಕಿನ ಗೋದೂರು ರಾಜಣ್ಣ ಕೊಲೆ ಮೊಕದ್ದಮೆಯನ್ನು ಹಾರೋಹಳ್ಳಿ ಪೋಲೀಸರು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದು, ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಮತಾ ಸೈನಿಕಾದಳ, ದಲಿತ ಸೇನೆ, ಅಖಿಲ ಕರ್ನಾಟಕ ದಲಿತ ಹಿಂದುಳಿದವರ ವೇದಿಕೆ, ಸರ್ವಜನ ಸಮಾಜ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಸಮತಾ ಸೈನಿಕಾ ದಳದ ಜಿಲಾಧ್ಯಕ್ಷ ಗೋವಿಂದಯ್ಯ `ತಾಲ್ಲೂಕಿನ ಮರಳವಾಡಿ ಹೋಬಳಿ, ಗೋದೂರು ಗ್ರಾಮದ ಎ.ಸಿ. ರಾಜಣ್ಣ ನವರ ಕೊಲೆಯಾಗಿ ಇಂದಿಗೆ ಒಂದು ವಾರ ಕಳೆದಿದ್ದರೂ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಆರೋಪಿಯೊಂದಿಗೆ ಶಾಮೀಲಾಗಿ ಕಾನೂನು ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ~ಎಂದು ದೂರಿದರು.
ಸಮತಾ ಸೈನಿಕ ದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆ ಕುಮಾರ್, ಅಖಿಲ ಕರ್ನಾಟಕ ದಲಿತ ಹಿಂದುಳಿದವರ ವೇದಿಕೆ ಜಿಲ್ಲಾಧ್ಯಕ್ಷ ರಾಂಪುರ ನಾಗೇಶ್, ದಲಿತ ಸೇನೆಯ ಜಿಲ್ಲಾಧ್ಯಕ್ಷ ಅಶೋಕ್ಕುಮಾರ್, ದಲಿತ ಮುಖಂಡರಾದ ಅನಂತಕುಮಾರ್, ರವಿ ಗಿರೇನಹಳ್ಳಿ, ಚಂದ್ರು, ಅಂಜನಮೂರ್ತಿ, ಕೋಟೆ ಪ್ರಕಾಶ್, ಬನಶಂಕರಿನಾಗು, ರೂಪೇಶ್ಕುಮಾರ್, ಮುತ್ತುರಾಜ್, ವೈರಮುಡಿ, ಮುದ್ದುಕೃಷ್ಣ, ರುದ್ರೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.