ಬೀದರ್: ಸುಗ್ರಿವಾಜ್ಞೆ ಮೂಲಕ ರಾಜ್ಯದಲ್ಲಿ ಜಾರಿಗೆ ತರಲಾದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಅಖಿಲ ಭಾರತ ಕ್ರೈಸ್ತ ಮಹಾಸಭಾ ಆಗ್ರಹಿಸಿದೆ.
ಮಹಾಸಭಾ ಪದಾಧಿಕಾರಿಗಳು ನಗರದಲ್ಲಿ ಶನಿವಾರ ನಿಯೋಗದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಭೇಟಿ ಮಾಡಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
ರಾಜ್ಯದಲ್ಲಿ ಚರ್ಚ್ಗಳು, ಧರ್ಮಗುರುಗಳು ಹಾಗೂ ಕ್ರೈಸ್ತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ನಿರಂತರ ನಡೆದಿವೆ. ಮತಾಂತರದ ಹುಸಿ ಆರೋಪ ಹೊರೆಸಿ ಕ್ರೈಸ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ದೂರಿದರು. ಕ್ರೈಸ್ತರಿಗೆ ತೊಂದರೆ ಕೊಡುವವರು ಕಾಯ್ದೆ ದುರುಪಯೋಗ ಪಡೆಸಿಕೊಳ್ಳುವ ಸಾಧ್ಯತೆ ಇರುವ ಕಾರಣ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಮಹಾಸಭಾ ಸಂಸ್ಥಾಪಕ ಪ್ರಜ್ವಲ್ ಸ್ವಾಮಿ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಜಾರ್ಜ್ ಫನಾರ್ಂಡೀಸ್, ಜಿಲ್ಲಾ ಘಟಕದ ಅಧ್ಯಕ್ಷ ಯೇಸುದಾಸ ಆಣದೂರೆ, ಪ್ರಮುಖರಾದ ಸುಂದರರಾಜ್, ಮಾರ್ಟಿನ್, ಹ್ಯಾನ್ಸಿ ಹನೋಕ್ ನಿಯೋಗದಲ್ಲಿ ಇದ್ದರು.