ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ರೋಗಿಗಳಿಗೆ ಆಮ್ಲಜನಕದ ಕೊರತೆ ನೀಗಿಸಲು ಶಿವಮೊಗ್ಗ ಪದವೀಧರರ ಸಹಕಾರ ಸಂಘ ನೆರವು ನೀಡಿತು.
ಕೋವಿಡ್ ರೋಗಿಗಳಿಗೆ ತುರ್ತಾಗಿ 11 ಟನ್ ಆಮ್ಲಜನಕ (ಒಂದು ಟ್ಯಾಂಕರ್) ಖರೀದಿಸಲು ಅಗತ್ಯವಾದ ₹ 2.10 ಲಕ್ಷ ಮೌಲ್ಯದ ಚೆಕ್ ಅನ್ನು ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಅವರುಶನಿವಾರ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಹಸ್ತಾಂತರಿಸಿದರು.
ಸಂಘದ ಉಪಾಧ್ಯಕ್ಷೆ ಎಸ್.ಮಮತಾ, ನಿರ್ದೇಶಕರಾದ ಟಿ.ಜಗದೀಶ, ಎಸ್.ಎಚ್.ಪ್ರಸನ್ನ, ಎಸ್.ಕೆ. ಕೃಷ್ಣಮೂರ್ತಿ, ಕಾರ್ಯದರ್ಶಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಕೊರೊನಾ ಮೊದಲ ಅಲೆಯ ಸಮಯದಲ್ಲಿ ಸರ್ಕಾರ ಲಾಕ್ಡೌನ್ ಘೋಷಿಸಿದಾಗ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಪದವೀಧರರ ಸಂಘ ₹ 3 ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿತ್ತು. ತುಂಗಾ ನದಿ ಪ್ರವಾಹದಿಂದ ನೆಲೆ ಕಳೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ನೆಲೆಸಿದ್ದ ಕುಟುಂಬಗಳಿಗೆ ₹ 2 ಲಕ್ಷ ಮೌಲ್ಯದ ಹೊದಿಕೆಗಳು, ಟವಲ್ಗಳನ್ನು ನೀಡಿತ್ತು. ತಾಲ್ಲೂಕಿನ ಆಡೋನಹಳ್ಳಿ ಬಳಿ ಗಣಪತಿ ವಿಸರ್ಜನೆಗೆ ಹೋಗಿ ಮುಳುಗಿದ್ದ 12 ಯುವಕರ ಶವಗಳನ್ನು ಹೊರತೆಗೆದಿದ್ದ ಹರಿಹರದ ದಾದಾಪೀರ್ ಮತ್ತು ಅವರ ಮುಳುಗು ತಂಡದ ಸದಸ್ಯರಿಗೆ ಲೈಫ್ಜಾಕೇಟ್ ಹಾಗೂ ನಗದು ನೀಡಿ ಪುರಸ್ಕರಿಸಿತ್ತು.
‘ಪದವೀಧರರ ಸಂಘದ ಕಾರ್ಯ ಶ್ಲಾಘನೀಯ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಂಘಸಂಸ್ಥೆಗಳು ಕೈಜೋಡಿಸಿದರೆ ಯಶಸ್ಸು ಖಂಡಿತಾ ಸಾಧ್ಯ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಶ್ಲಾಘಿಸಿದರು.