ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಸಾವಿರ ಅತಿಥಿ ಉಪನ್ಯಾಸಕರು ಬೀದಿಗೆ

15 ಗಂಟೆ ಕಾರ್ಯಭಾರದ ಸರ್ಕಾರದ ಆದೇಶ ತಂದ ಸಮಸ್ಯೆ
Last Updated 18 ಜನವರಿ 2022, 5:34 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿರುವ ಸರ್ಕಾರದ ಆದೇಶದಿಂದಾಗಿ ರಾಜ್ಯದಲ್ಲಿ 7 ಸಾವಿರದಿಂದ 8 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಮಣಿದ ಸರ್ಕಾರ ವೇತನ ಹೆಚ್ಚಳ ಮಾಡಿ ಆದೇಶಿಸಿತ್ತು.

ಈ ಮೊದಲು ಒಂದು ವಾರದಲ್ಲಿ ಕಲಾ ವಿಭಾಗದ ಅತಿಥಿ ಉಪನ್ಯಾಸಕರು 8 ಗಂಟೆ, ವಿಜ್ಞಾನ ವಿಭಾಗದ ಉಪನ್ಯಾಸಕರು 10 ಗಂಟೆ ಕಾರ್ಯಭಾರ ಹೊಂದಿದ್ದರು. ಆದರೆ ಈಗ 15 ಗಂಟೆಗೆ ಏರಿಕೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಇದರಿಂದಾಗಿ ಈಗಿರುವ ಉಪನ್ಯಾಸಕರ ಪೈಕಿ ಅರ್ಧದಷ್ಟು ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ರಾಜ್ಯದಲ್ಲಿ 430 ಸರ್ಕಾರಿ ಪದವಿ ಕಾಲೇಜುಗಳ 14,564 ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಯುಜಿಸಿ ನಿಗದಿಪಡಿಸಿದ ಅರ್ಹತೆ ಹೊಂದಿದ ₹ 13 ಸಾವಿರ ಗೌರವಧನ ಪಡೆಯುತ್ತಿದ್ದವರಿಗೆ ₹ 32 ಸಾವಿರ, ಯುಜಿಸಿ ಅರ್ಹತೆ ಹೊಂದಿಲ್ಲದ ₹ 11 ಸಾವಿರ ಗೌರವಧನ ಪಡೆಯುತ್ತಿದ್ದವರಿಗೆ ₹ 28 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಒಬ್ಬ ಉಪನ್ಯಾಸಕರು 15 ಗಂಟೆ ಕಾರ್ಯಾಭಾರ ನೀಡುವುದರಿಂದ ಇಬ್ಬರ ಗೌರವಧನವನ್ನು ಒಬ್ಬರು ಪಡೆಯುತ್ತಾರೆ. ಒಬ್ಬರೇ 15 ಗಂಟೆ ಕಾರ್ಯನಿರ್ವಹಿಸುವುದರಿಂದ ಇನ್ನೊಬ್ಬರು ಕೆಲಸ ಕಳೆದುಕೊಳ್ಳಲಿದ್ದಾರೆ. ಹೀಗೆ ಉದ್ಯೋಗ ಕಳೆದುಕೊಳ್ಳುವ ಉಪನ್ಯಾಸಕರು ಸುಮಾರು 7,500 ಮಂದಿ. ಜಿಲ್ಲೆಯಲ್ಲಿ 594 ಮಂದಿ, ತಾಲ್ಲೂಕಿನಲ್ಲಿ 61 ಮಂದಿ ಅತಿಥಿ ಉಪನ್ಯಾಸಕರು ಇದ್ದು, ಅದರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳುವಸಾಧ್ಯತೆ ಇದೆ.

ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭ ಮಾಡಿದೆ. ಒಟ್ಟು ರಾಜ್ಯದಲ್ಲಿ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಭರ್ತಿಯಾಗಲಿದ್ದು, ಅಂದಾಜು 2,500 ಅತಿಥಿ ಉಪನ್ಯಾಸಕರು ಮತ್ತೆ ಕೆಲಸ ಕಳೆದುಕೊಳ್ಳುವ ಆತಂಕ ಇದೆ.

ಬೇಡಿಕೆ ಏನಿತ್ತು: ರಾಜ್ಯದಲ್ಲಿ ಈಗ ಸೇವೆ ಸಲ್ಲಿಸುತ್ತಿರುವ 14,564 ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿ ಸಕ್ರಮಕ್ಕೆ ಕ್ರಮ ವಹಿಸಬೇಕು. ಜೆಒಸಿ, ಮೊರಾರ್ಜಿ, ಗುತ್ತಿಗೆ, 12 ತಿಂಗಳ ಗೌರವಧನ ಮತ್ತು ಸೇವಾ ಭದ್ರತೆ ಒದಗಿಸಿ ಕಾಯಂಗೊಳಿಸುವುದು. ಸೇವಾ ವಿಲೀನ ಮಾಡುವ ಮೂಲಕ ಇತರ ನಾಗರಿಕ ಸೇವೆಗೆ ಪರಿಗಣಿಸುವಂತೆ ಬೇಡಿಕೆ ಇಡಲಾಗಿತ್ತು. ಆದರೆ ಸರ್ಕಾರ ಗೌರವಧನ ಮಾತ್ರ ಹೆಚ್ಚಳ ಮಾಡಿ ಮೇಲ್ನೋಟಕ್ಕೆ ಕಣ್ಣೊರೆಸುವ ತಂತ್ರ ಅನುಸರಿಸಿದೆ ಎಂದು ದೂರುತ್ತಾರೆ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಲೋಕೇಶ್‌ ಪಿ.ಸಿ.

ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳುವ ಬಗ್ಗೆ ಸ್ಪಷ್ಟತೆ ಇಲ್ಲ. ಸೇವಾ ಅವಧಿ ಗುರುತಿಸಿ ನೇಮಕ ಮಾಡಿಕೊಳ್ಳುವ ನಿಯಮ ತಿಳಿದಿದೆ. ಪಾಯಿಂಟ್ಸ್‌ ಆಧಾರದ ವಿಷಯದ ಬಗ್ಗೆ ಮಾಹಿತಿ ಇಲ್ಲ.

ಎಚ್.ಡಿ. ಧರ್ಮಣ್ಣ, ಪ್ರಾಂಶುಪಾಲ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಬೆಲೆ ಏರಿಕೆ, ನಿರುದ್ಯೋಗ, ಬಡತನ ಸಮಸ್ಯೆಯಿಂದ ದೇಶ ಸಂಕಷ್ಟದ ಸ್ಥಿತಿಯಲ್ಲಿದೆ. ಈಗಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ಹಣ ಉಳಿತಾಯ ಮಾಡುವ ಉದ್ದೇಶದಿಂದ ಯಾರನ್ನೂ ಕೈಬಿಡಬಾರದು.

ಕಿಮ್ಮನೆ ರತ್ನಾಕರ, ಮಾಜಿ ಶಿಕ್ಷಣ ಸಚಿವ

ಮೇಲ್ನೋಟಕ್ಕೆ ಸರ್ಕಾರದ ಆದೇಶ ಆಶಾದಾಯಕವಾಗಿದೆ. ಹಂತ ಹಂತವಾಗಿ ಅತಿಥಿ ಉಪನ್ಯಾಸಕರನ್ನು ಮುಗಿಸುವ ಹುನ್ನಾರ ಇದು. ಪ್ರತಿಭಟನೆ ಹತ್ತಿಕ್ಕುವ ತಂತ್ರ. ಈ ಆದೇಶದಿಂದ ನಿರುದ್ಯೋಗ ಸೃಷ್ಟಿಯಾಗಲಿದೆ.

ಪೂರ್ಣೇಶ್‌ ಸಿ.ಎಸ್.‌, ಅಧ್ಯಕ್ಷ, ಅತಿಥಿ ಉಪನ್ಯಾಸಕರ ಸಂಘ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT