ಶಿವಮೊಗ್ಗ: ಭದ್ರಾವತಿ ನಗರಸಭೆ ಚುನಾವಣೆಯಲ್ಲಿ ರಾಜಕೀಯ ದ್ರುವೀಕರಣವಾಗಲಿದೆ. ರಾಜಕಾರಣದ ಹೊಸ ಯುಗ ಆರಂಭವಾಗಲಿದ್ದು, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಎಲ್ಲಾ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುತ್ತಾ ಬಂದಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಗೆಲುವು ಸಾಧಿಸಿದೆ. ಏ.27 ರಂದು ನಡೆಯುವ ಭದ್ರಾವತಿ ನಗರಸಭಾ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ತನ್ನದೇ ತತ್ವ, ಸಿದ್ದಾಂತಗಳು, ಕಾರ್ಯಕರ್ತರ ಮೂಲಕ ಚುನಾವಣೆ ಎದುರಿಸಲಿದೆ. ಈಗಾಗಲೇ 21 ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಕಾರ್ಯಕರ್ತರು, ಮಂಡಲ ಕಾರ್ಯದರ್ಶಿಗಳು, ವಿವಿಧ ವಿಭಾಗದ ಮುಖ್ಯಸ್ಥರು ಸೇರಿದಂತೆ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಬಿಜೆಪಿಗೆ ಬಂದ ಇತರ ಪಕ್ಷದ ಅಭ್ಯರ್ಥಿಗಳಿಗೂ ಟಿಕೆಟ್ ನೀಡಲಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಶಾಸಕರಿಲ್ಲ. ಆದರೂ ಭದ್ರಾವತಿ ರಾಜಕಾರಣದ ದಿಕ್ಕು ಬೇರೆ ರೀತಿ ಸಾಗುತ್ತಿದೆ. ಕೇಂದ್ರದಲ್ಲಿ ಪ್ರಧಾನಿ ಅವರ ಉತ್ತಮ ಆಡಳಿತ, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ಕೊಡುಗೆ, ಸಂಸದರ ಯೋಜನೆಗಳು ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ನಿರೀಕ್ಷೆಗೂ ಮೀರಿ ಭದ್ರಾವತಿಯಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದು ವಿವರ ನೀಡಿದರು.
ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯದ ಘಟನೆ ಚುನಾವಣೆಗೆ ಬಳಸಿಕೊಳ್ಳುವುದಿಲ್ಲ. ಮನೆ ಮನೆ ಪ್ರಚಾರಕ್ಕೆಒತ್ತು ನೀಡಲಾಗುವುದು. ಭಿವೃದ್ಧಿಯೇ ಪ್ರಮುಖ ವಿಷಯವಾಗಲಿದೆ ಎಂದರು.