ಶಿರಾಳಕೊಪ್ಪ: ಸಮೀಪದ ತೊಗರ್ಸಿ ಗ್ರಾಮದ ಒಬ್ಬರಿಗೆ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಫೋಟೊ ಕಳಿಸುವಂತೆ ಬ್ಲ್ಯಾಕ್ಮೇಲ್ ಮಾಡಿ ಆಕೆಯ ಆತ್ಮಹತ್ಯೆಗೆ ಕಾರಣವಾಗಿದ್ದ ಯುವಕನನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ರಾಮಗೊಂಡನಹಳ್ಳಿ ಗ್ರಾಮದ ಪುನೀತ ಬಂಧಿತ ಯುವಕ. ಆತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಯುವತಿಯನ್ನು ಪರಿಚಯಿಸಿಕೊಂಡು, ಅವಳ ಖಾಸಗಿ ಅಂಗಾಂಗಗಳ ವಿಡಿಯೊಗಳನ್ನು ಮೊಬೈಲ್ ಸ್ಕ್ರೀನ್ ರೆಕಾಡಿಂಗ್ ಮೂಲಕ ಚಿತ್ರಿಸಿಕೊಂಡಿದ್ದ ಪುನೀತ್ ನಂತರ ಯುವತಿಗೆ ವಿಡಿಯೊ ತೋರಿಸಿ ಪದೇ ಪದೇ ಬ್ಲಾಕ್ ಮೇಲ್ ಮಾಡಿದ್ದ. ಇದರಿಂದ ನೊಂದಿದ್ದ ಯುವತಿ ಏ.6ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಯುವತಿ ಪೋಷಕರು ದೂರು ನೀಡಿದ್ದರು.
ಯುವಕ ಇದೇ ರೀತಿ ಹಲವು ಯುವತಿಯರು ಹಾಗೂ ಮಹಿಳೆಯರಿಗೂ ವಂಚಿಸಿ ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎನ್ನಲಾಗಿದೆ.
ಈತನಿಂದ ಹಿಂಸೆಗೆ ಒಳಗಾಗಿರುವವರು ಠಾಣೆಗೆ ಬಂದು ದೂರು ಸಲ್ಲಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪಟ್ಟಣ ಠಾಣೆಯ ಸಬ್ ಇನ್ಸ್ಪೆಕ್ಟರ್ ರಮೇಶ್, ಆರ್.ಸಿ. ಮಂಜುನಾಥ, ಎಚ್.ಪ್ರಭುಗೌಡ, ಎಚ್. ಜಿ.ಗುರುರಾಜ್, ಜಿ.ಇಂದ್ರೇಶ್, ವಿಜಯಕುಮಾರ, ನರಸಿಂಹ, ಗಿರಿಸ್ವಾಮಿ, ಕಾಂತೇಶ್ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.