ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಗುತ್ತಿ: ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ

ಫೆ. 25ರಿಂದ ಮಾರ್ಚ್‌ 1ರವರೆಗೆ ಐತಿಹಾಸಿಕ ರೇಣುಕಾಂಬಾ ಜಾತ್ರೆ
Last Updated 22 ಫೆಬ್ರುವರಿ 2023, 6:44 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬಾ ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡಿದ್ದು, ಫೆ. 25ರಿಂದ ಮಾರ್ಚ್ 1ರವರೆಗೆ ಜಾತ್ರೆ ನಡೆಯಲಿದೆ.

ಮಹೋತ್ಸವಕ್ಕೆ ತಾಲ್ಲೂಕು ಆಡಳಿತ, ಚಂದ್ರಗುತ್ತಿ ಗ್ರಾಮ ಪಂಚಾಯಿತಿ ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ
ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಫೆ. 25ರಂದು ಕಂಕಣ ಬಂಧನ, ಧ್ವಜಾರೋಹಣ ಭೇರಿತಾಡನೆ, 26ರಂದು ಕಳಶ ಸ್ಥಾಪನೆ, ಯಾಗಶಾಲೆ ಪ್ರವೇಶ, ಬೃಷಭ ಯಂತ್ಯೋತ್ಸವ, ಪುಷ್ಪಮಂಜರಿ ಯಂತ್ಯೋತ್ಸವ ಹಾಗೂ ಹೂವಿನ ತೇರು ನಡೆಯಲಿದೆ.

28ರಂದು ಬ್ರಹ್ಮ ರಥೋತ್ಸವ ಹಾಗೂ ಮಾರ್ಚ್ 1ರಂದು ದೇವಿಗೆ ಓಕುಳಿ ಹಾಗೂ 2ರಂದು ತುಲಾಭಾರ ನಡೆಯಲಿದೆ. ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಪೂಜಾ ವಿಧಿ–ವಿಧಾನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ತೊಟ್ಟಿಲು ಬಾವಿ ಸಮೀಪ ದೇವರಿಗೆ ನೇವೈದ್ಯ ಹಾಗೂ ಹಣ್ಣು ಕಾಯಿ ಪೂಜೆ ಸಲ್ಲಿಸಲು ಅವಕಾಶವಿದೆ.

ತೊಟ್ಟಿಲು ಬಾವಿಯಲ್ಲಿ ನೀರು ತುಂಬುವುದನ್ನು ಹಾಗೂ ಬೆತ್ತಲೆ ಸೇವೆ ಆಚರಣೆಗೆ ಹಲವು ವರ್ಷಗಳಿಂದ ನಿಷೇಧ ಹೇರಲಾಗಿದೆ. ಜಾತ್ರೆ ಅಂಗವಾಗಿ ರೇಣುಕಾಂಬಾ ದೇವಸ್ಥಾನದ ಮೆಟ್ಟಿಲು, ರಥಬೀದಿ ಆವರಣದುದ್ದಕ್ಕೂ ಮತ್ತು ಗ್ರಾಮದಲ್ಲಿನ ಪರಿವಾರ ದೇವಸ್ಥಾನಗಳನ್ನು ಸಿಂಗಾರಗೊಳಿಸಲಾಗಿದೆ. ಗ್ರಾಮವನ್ನು ಸಂಪೂರ್ಣ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ.

ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಗ್ರಾಮ ಪಂಚಾಯಿತಿ ಆಡಳಿತ ಕುಡಿಯುವ ನೀರಿಗಾಗಿ ವ್ಯವಸ್ಥೆ ಮಾಡಿಕೊಂಡಿದೆ.

ಸ್ವಚ್ಛತೆಗೆ ಆದ್ಯತೆ ನೀಡಲು ಮುಂದಾಗಿದ್ದು, ಸುಲಭ ಶೌಚಾಲಯ ನಿರ್ಮಿಸಲಾಗಿದೆ. ಸೊರಬ, ಶಿರಸಿ, ಸಿದ್ದಾಪುರ ಮಾರ್ಗವಾಗಿ ಬರುವ ವಾಹನಗಳ ದಟ್ಟಣೆ ತಪ್ಪಿಸಲು ಗ್ರಾಮ ಪಂಚಾಯಿತಿ ವತಿಯಿಂದ ಸಮರ್ಪಕ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ವರ್ಷದಂತೆ ವಾರದ ಹಿಂದೆಯೇ ಹಾವೇರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಧಾರವಾಡ ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಾತ್ರೆಗೆ ಬಂದಿದ್ದು, ಜಾಗವನ್ನು ಕಾಯ್ದಿಸಿರಿಕೊಂಡು ಅಂಗಡಿ– ಮುಂಗಟ್ಟುಗಳನ್ನು ಹಾಕಿಕೊಂಡಿದ್ದಾರೆ.

‘ಬ್ರಹ್ಮ ರಥೋತ್ಸವದಂದು ಉಪಾಧ್ಯೆವಂತರು ಮತ್ತು ತಾಂತ್ರಿಕ ಅರ್ಚಕರ ಸಮ್ಮುಖದಲ್ಲಿ ಪರಿಹಾರ ದೇವತೆಗಳಿಗೆ ಅನ್ನ ಮತ್ತು ಸೊಪ್ಪಿನಿಂದ ಮಿಶ್ರಣ ಮಾಡಿದ ಆಹಾರವನ್ನು ಬಲಿ ಕೊಡುವುದರ ಮೂಲಕ ದೇವಿಯ ಪುರ ಮೆರವಣಿಗೆ ನಡೆಸಲಾಗುವುದು’ ಎಂದು ಪ್ರಧಾನ ಅರ್ಚಕ ಅರವಿಂದ್ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.ಪ್ರತಿ ವರ್ಷ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಕಾರಣ ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಶಿವಮೊಗ್ಗದ ವಿಮಾನ‌ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರುವ ಕಾರಣ ಹೆಚ್ಚುವರಿ ತುಕಡಿಗಳನ್ನು ನಿಯೋಜನೆ ಮಾಡಿಲ್ಲ. ಪಿಎಸ್ಐ ಸೇರಿದಂತೆ ಪೊಲೀಸರನ್ನು ಮಾತ್ರ ನಿಯೋಜಿಸಲಾಗಿದೆ.

ಉತ್ತರ ಕರ್ನಾಟಕದ ಭಾಗದಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಸಾರಿಗೆ ಸಂಸ್ಥೆಯಿಂದ ಜಡೆ, ಆನವಟ್ಟಿ, ಶಿರಾಳಕೊಪ್ಪ ಮಾರ್ಗವಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

***

ವರದಾ ಹರಿದರೂ ಕುಡಿಯುವ ನೀರಿಗೆ ಬರ

ಗ್ರಾಮದಲ್ಲಿ ಪ್ರಮುಖ ನದಿಯಾದ ವರದಾ ಹರಿದಿದ್ದರೂ ಕುಡಿಯುವ ನೀರಿಗಾಗಿ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿಲ್ಲ ಎನ್ನುವ ಆರೋಪವಿದೆ. ಈಗಾಗಲೇ ನದಿಯ ಒಡಲು ಬಿರಿದಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದರೂ ಜನರ ಉಪಯೋಗಕ್ಕೆ ಸಿಕ್ಕಿಲ್ಲ. ಹೊರಭಾಗದಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ಯಾತ್ರಿ ನಿವಾಸ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಜಾತ್ರಾ ಮಹೋತ್ಸವಕ್ಕೆ ಅಪಾರ ಭಕ್ತರು ಬರುವುದರಿಂದ ಉಳಿದುಕೊಳ್ಳಲು ಯಾತ್ರಿನಿವಾಸ ಕೊರತೆ ಇದೆ.

ದೇವಸ್ಥಾನಕ್ಕೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದರೂ ಸರ್ಕಾರ ಮತ್ತು ಧಾರ್ಮಿಕ ದತ್ತಿ ಇಲಾಖೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದೆ ಎನ್ನುವ ಮಾತು ಭಕ್ತರಿಂದ ಕೇಳಿ ಬರುತ್ತಿದೆ.

***

ಜಾತ್ರೆ ಸುಗಮವಾಗಿ ನಡೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದಾನಿಗಳಿಂದ ಸಹಕಾರ ಪಡೆದು ಜಾತ್ರೆಯ ಎರಡೂ ದಿನ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಗುವುದು.

ಪ್ರಸನ್ನಶೇಟ್, ಅಧ್ಯಕ್ಷ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT