ಹೊಸನಗರ: ಕಾಂಗ್ರೆಸ್ ಪಕ್ಷ ಬಡವರು, ಕೂಲಿಕಾರ್ಮಿಕರಿಗೆ ನೀಡಿದ ಗ್ಯಾರಂಟಿ ಕಾರ್ಡ್ ಆಸೆ ನನ್ನ ಸೋಲಿಗೆ ಕಾರಣ ಆಗಿರಬಹುದು ಎಂದು ಸಾಗರ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.
‘ಕ್ಷೇತ್ರದಲ್ಲಿ ನಾನು ನಡೆಸಿದ ಅಭಿವೃದ್ಧಿಗೆ 72,000ಕ್ಕೂ ಅಧಿಕ ಜನರು ಮತ ನೀಡಿದ್ದಾರೆ. ಆದರೆ ಸೋಲಾಗಿದೆ ಸೋಲನ್ನು ಸ್ವೀಕರಿಸುತ್ತೇನೆ’ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶರಾವತಿಗೆ ಸೇತುವೆ ಮಾಡಿ ನಮ್ಮ ಮನೆಮನೆಗಳಲ್ಲಿ ನಿಮ್ಮ ಫೋಟೋ ಇಡುತ್ತೇವೆ ಎಂದರೂ ಮತ ಹಾಕಲಿಲ್ಲ. ಪಟಗುಪ್ಪ ಸೇತುವೆ ಮಾಡಿದೆ ಅಲ್ಲೂ ನಿರೀಕ್ಷಿತ ಮತಗಳು ಬಂದಿಲ್ಲ. ಸೋಲು ಸಾಮಾನ್ಯ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೋತಿದ್ದಾರೆ. ಸೋಲು–ಗೆಲುವು ಪ್ರಜಾಪ್ರಭುತ್ವದ ಕರ್ತವ್ಯ’ ಎಂದರು.
‘ಸೋಲಿನಿಂದ ಕಾರ್ಯಕರ್ತರು ಕಂಗೆಡುವ ಅಗತ್ಯವಿಲ್ಲ. ಸಂಘಟನೆ ಶಕ್ತಿ ಇನ್ನಷ್ಟು ಹೆಚ್ಚಿಸೋಣ. ನೂತನ ಶಾಸಕರಿಗೆ ಶುಭವಾಗಲಿ’ ಎಂದು ಆಶಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು, ಪ್ರಮುಖರಾದ ಎನ್.ಆರ್.ದೇವಾನಂದ್, ಆರ್ ಟಿ ಗೋಪಾಲ್, ನಿತಿನ್ ನಗರ, ಎಂ.ಎನ್. ಸುಧಾಕರ್, ರಾಜೇಶ ಕೀಳಂಬಿ, ಮಂಡಾನಿ ಮೋಹನ್, ಶ್ರೀಧರ ಉಡುಪ ಸೇರಿದಂತೆ ಪ್ರಮುಖರು ಇದ್ದರು.