ಶಿವಮೊಗ್ಗ: ಹೊಂಗಿರಣ ತಂಡದ 25ನೇ ವರ್ಷಾಚರಣೆಯ ಸಹಾಯಾರ್ಥವಾಗಿ ಡಿ.13ರ ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಕೃಷ್ಣ ಸಂಧಾನ’ ಹಾಸ್ಯನಾಟಕ ಪ್ರದರ್ಶನವಿದೆ.
1996ರಿಂದ ಹೊಂಗಿರಣ ತಂಡ ನಿರಂತರ ಕ್ರಿಯಾಶೀಲ ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಪುಸ್ತಕ ಪ್ರಕಾಶನ ಹಾಗೂ ಸಾಹಿತ್ಯ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಕಾರ್ಯಚಟುವಟಿಕೆಯು ರಾಜ್ಯವ್ಯಾಪಿ ವಿಸ್ತಾರಗೊಂಡಿದೆ. ಕೊರೊನಾ ಹಾವಳಿಯಿಂದ ಸಂಕಷ್ಟದಲ್ಲಿದ್ದ ರಂಗ ಕಲಾವಿದರಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿಯನ್ನು ಅವರ ಮನೆಗೆ ತಲುಪಿಸಿದ ತಂಡ ಈಗ ಮತ್ತೆ ನಗುವಿನೊಂದಿಗೆ ತನ್ನ ರಂಗ ಪ್ರಯಾಣ ಪುನಾರಂಭಿಸಲು ಸಜ್ಜಾಗಿದೆ. ಜನವರಿಯಲ್ಲಿ 25ನೇ ವರ್ಷಕ್ಕೆ ಕಾಲಿಡಲಿದೆ. ವರ್ಷವಿಡೀ ವಿನೂತನ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ರಂಗ ನಿರ್ದೇಶಕ ಚಂದ್ರಶೇಖರ ಹಿರೇಗೋಣಿಗೆರೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೊರೊನಾ ಕಾರಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ನೀಡುತ್ತಿಲ್ಲ. ಹಾಗಾಗಿ, ಸಹಾಯಾರ್ಥ ಪ್ರದರ್ಶನ ಆಯೋಜಿಸಲಾಗಿದೆ. ಪ್ರೋತ್ಸಾಹ ಶುಲ್ಕವಾಗಿ ₹ 50 ಮತ್ತು ₹ 100 ನಿಗದಿ ಪಡಿಸಲಾಗಿದೆ. ಅಂದೇ ರಂಗಮಂದಿರದ ಮುಂಭಾಗ ಟಿಕೆಟ್ ದೊರೆಯಲಿದೆ. ನಾಟಕ ಪ್ರದರ್ಶನದ ವೇಳೆ ಸಭಾ ಕಾರ್ಯಕ್ರಮ ಇರುವುದಿಲ್ಲ. ಈ ನಾಟಕ ಈಗಾಗಲೇ 10 ಪ್ರದರ್ಶನ ಕಂಡಿದೆ ಎಂದು ವಿವರ ನೀಡಿದರು.
ನಾಟಕದ ಪ್ರಮುಖ ಪಾತ್ರದಲ್ಲಿ ಕಿರುತೆರೆ ನಟಿ ಸುಪ್ರಿಯಾ ಎಸ್.ರಾವ್, ಚಂದ್ರಶೇಖರ ಹಿರೇಗೋಣಿಗೆರೆ, ಎಚ್.ಕೆ.ರಮೇಶ್, ಸಾಸ್ವೆಹಳ್ಳಿ ಸತೀಶ್, ಚಂದ್ರಶೇಖರ ಶಾಸ್ತ್ರಿ, ಶಿವಕುಮಾರ ಮಾವಲಿ ಮತ್ತಿತರರು ಅಭಿನಯಿಸುತ್ತಿದ್ದಾರೆ ಎಂದರು.