ಶಿರಾಳಕೊಪ್ಪ: ಸಮೀಪದ ಕಡೇನಂದಿಹಳ್ಳಿಯಲ್ಲಿ ಬಾಳೆಹೊನ್ನೂರು ರಂಭಾಪುರಿಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯರ ದಸರಾ ದರ್ಬಾರ್ಗೆ ಅದ್ದೂರಿ ಚಾಲನೆ ದೊರೆಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ಸಂಸದ ಬಿ.ವೈ. ರಾಘವೇಂದ್ರ, ‘ದಸರಾ ನಾಡಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಅಂದು ಪ್ರಭುಗಳಿಂದ ನಡೆಯುತ್ತಿದ್ದ ಈ ಆಚರಣೆ ಇಂದು ಪ್ರಜಾಪ್ರಭುತ್ವದ ಚಹರೆ ಮೈಗೂಡಿಸಿಕೊಂಡಿದೆ. ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಹಬ್ಬಗಳು ಐತಿಹಾಸಿಕ ಪೌರಾಣಿಕ ಮಹತ್ವ ಪಡೆದಿವೆ. ರಂಭಾಪುರಿ ಶ್ರೀಗಳು ನಮ್ಮ ಕ್ಷೇತ್ರಕ್ಕೆ ಪಾದಸ್ಪರ್ಶ ಮಾಡಿರುವುದು ನಮ್ಮ ಪುಣ್ಯ’ಎಂದು ತಿಳಿಸಿದರು.
ಶಿಕಾರಿಪುರ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ₹ 850 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಕೈಗೊಳ್ಳಲಾಗಿದ್ದು, 119 ಗ್ರಾಮದ ಜನರಿಗೆ ಅನುಕೂಲವಾಗಲಿದೆ. ಉಡುಗಣಿ ತಾಳಗುಂದ ನೀರಾವರಿ ಯೋಜನೆಯಿಂದ 249 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಇದು ಏಷ್ಯಾದ ದೊಡ್ಡ ನೀರಾವರಿ ಯೋಜನೆ ಎಂದರು.
ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದ ನೂತನ ಕಟ್ಟಡವನ್ನು ಯಡಿಯೂರಪ್ಪ ಉದ್ಘಾಟಿಸಿದರು.
ರಂಭಾಪುರಿ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಡೇನಂದಿಹಳ್ಳಿ ಪೀಠಾಧಿಪತಿ ರೇವಣಸಿದ್ದೇಶ್ವರ ಸ್ವಾಮೀಜಿ,ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಕೊಳಗಿ ರೇವಣಪ್ಪ ಸೇರಿ ವಿವಿಧ ಮಠಾಧೀಶರು ಇದ್ದರು.