ಸಾಗರ: ಸಮೀಪದ ಕಾಗೋಡು ಗ್ರಾಮದಲ್ಲಿ ನ.14ರಂದು ಬೆಳಿಗ್ಗೆ 11ಕ್ಕೆ ಕಾಗೋಡು ಸತ್ಯಾಗ್ರಹದ ಸ್ಮರಣೆ ಅಂಗವಾಗಿ ಸೊರಬದ ವಿಶ್ವ ಮಾನವ ಶಕ್ತಿ ಸತ್ಯಶೋಧಕ ಸಮಾಜ ಟ್ರಸ್ಟ್ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಮುಖ್ಯಸ್ಥ ಚಂದ್ರಪ್ಪ ಆರ್.ಬಿ. ಕೊಡಕಣಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗೋಡು ಗ್ರಾಮದ ಐತಿಹಾಸಿಕ ಅರಳಿಮರದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ವಿಶ್ವ ಮಾನವ ಕಲ್ಯಾಣ ಜ್ಯೋತಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
‘ಕಾಗೋಡು ಹೋರಾಟದ ರೂವಾರಿಗಳಾಗಿದ್ದ 8 ಕುಟುಂಬಗಳ ಸದಸ್ಯರಿಗೆ ಕರ್ನಾಟಕ ರತ್ನ, ಅನ್ನದಾತರು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನ.14ರಂದು ಬೆಳಿಗ್ಗೆ 8ಕ್ಕೆ ಕೊಡಕಣಿ ಗ್ರಾಮದ ರಾಮೇಶ್ವರ ದೇವಸ್ಥಾನದ ಆವರಣದಿಂದ ಕಾಗೋಡು ಗ್ರಾಮದವರೆಗೆ ಸೈಕಲ್ ಹಾಗೂ ಬೈಕ್ ಜಾಥಾ ಏರ್ಪಡಿಸಲಾಗಿದೆ’ ಎಂದು ಹೇಳಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದ ಉಂಟಾಗಿರುವ ದುಷ್ಪರಿಣಾಮಗಳ ಕುರಿತು ಸಂಗ್ರಹಿಸಿರುವ ವರದಿಯನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸಲಾಗುವುದು. ರೈತ ಸಮಾವೇಶದಲ್ಲಿ ಕೃಷಿ ಕಾಯ್ದೆ ತಿದ್ದುಪಡಿಯನ್ನು ಕೈಬಿಡುವಂತೆ, ಭಾರತದ ಹಳ್ಳಿಗಳನ್ನು ಸಂಪೂರ್ಣ ಮದ್ಯಮುಕ್ತ ಗ್ರಾಮವಾಗಿ ಘೋಷಿಸು ವಂತೆ ಒತ್ತಾಯಿಸಲಾ ಗುವುದು’ ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಪ್ರಮುಖರಾದ ಇಂದೂಧರ, ಸುಶೀಲ, ಶ್ಯಾಮಲ, ಎಂ.ಡಿ. ಯೋಗೀಶ್ವರಪ್ಪ, ಸದಾಶಿವ ಆರ್.ಬಿ. ಚೌಡಪ್ಪ, ನಾಗರಾಜ್ ಇದ್ದರು.