ಸಾಗರ: ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆಯ ಸರ್ವೆ ಕಾರ್ಯವನ್ನು ಭೂಮಾಪನಾ ಇಲಾಖೆ ನಡೆಸಿದ್ದು, ವರದಿ ಶೀಘ್ರ ಲಭ್ಯವಾಗಲಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ಮೀನುಗಾರಿಕೆ ಇಲಾಖೆ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಣಪತಿ ಕೆರೆಯಲ್ಲಿ ಮೀನಿನ ಮರಿಗಳ ಬಿತ್ತನೆಗೆ ಚಾಲನೆ ನೀಡಿ ಮಾತನಾಡಿದರು.
ಗಣಪತಿ ಕೆರೆಯ ವಿಸ್ತೀರ್ಣದ ಕುರಿತು ನ.11ರಂದು ವರದಿ ಸಲ್ಲಿಸುವಂತೆ ರಾಜ್ಯದ ಹೈಕೋರ್ಟ್ ನಿರ್ದೇಶನ ನೀಡಿದ್ದು, ಆ ಪ್ರಕಾರ ಅಧಿಕಾರಿಗಳು ಅಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಪ್ರದೇಶವಾದ ಹಸಿರುಮಕ್ಕಿ, ಗಣಪತಿ ಕೆರೆ ಸೇರಿ ವಿವಿಧೆಡೆ ಒಟ್ಟು 4 ಲಕ್ಷ ಮೀನಿನ ಮರಿಗಳನ್ನು ಬಿತ್ತನೆ ಮಾಡಲು ಮೀನುಗಾರಿಕೆ ಇಲಾಖೆ ಮುಂದಾಗಿದೆ. ಈ ಬಾರಿ ಗಣಪತಿ ಕೆರೆಗೆ 20 ಸಾವಿರ ಮೀನಿನ ಮರಿ ಬಿಡಲಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಪೌರಾಯುಕ್ತ ಎಚ್.ಕೆ. ನಾಗಪ್ಪ, ಸದಸ್ಯರಾದ ಟಿ.ಡಿ. ಮೇಘರಾಜ್, ಕೆ.ಆರ್. ಗಣೇಶ್ ಪ್ರಸಾದ್,ಇಲಾಖೆ ಅಧಿಕಾರಿಗಳಾದ ಸತೀಶ್, ರೇವತಿ, ಪ್ರಶಾಂತ್ ವರ್ಣೇಕರ್, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಹಂಜಾ ಇದ್ದರು.