ಸಾಗರ: ಗಾಂಧೀಜಿಯ ಹೆಸರೇ ಹೋರಾಟದ ಬದುಕಿಗೆ ಸ್ಫೂರ್ತಿ ನೀಡುವಂತಿದೆ. ಅಹಿಂಸಾ ಸಿದ್ಧಾಂತದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ಶನಿವಾರ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
‘ಸತ್ಯಾಗ್ರಹ, ಧರಣಿಯಂತಹ ಅಸ್ತ್ರಗಳ ಮೂಲಕ ಹೋರಾಟದಲ್ಲಿ ಗೆಲುವು ಸಾಧಿಸಬಹುದು ಎಂಬ ನಂಬಿಕೆಯನ್ನು ನಾವು ಯಾವತ್ತೂ ಕಳೆದುಕೊಳ್ಳಬಾರದು’ ಎಂದರು.
‘ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸರಳ ಬದುಕು ನಮ್ಮೆಲ್ಲರಿಗೂ ಮಾದರಿಯಾಗುವಂತಿದೆ. ರೈಲ್ವೆ ಸಚಿವರಾಗಿದ್ದಾಗ ರೈಲ್ವೆ ಅಪಘಾತವೊಂದಕ್ಕೆ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸ್ತ್ರಿಯವರ ನೈತಿಕತೆ ಇಂದಿನ ರಾಜಕಾರಣಕ್ಕೆ ಬೇಕಿದೆ’ ಎಂದರು.
ಉಪವಿಭಾಗಾಧಿಕಾರಿ ನಾಗರಾಜ್ ಎಲ್. ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಗ್ರೇಡ್-2 ತಹಶೀಲ್ದಾರ್ ಟಿ.ಪರಮೇಶ್ವರ್, ಆನಂದ ನಾಯ್ಕ್, ಜಿ.ಬಸವರಾಜ್ ಇದ್ದರು.