ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಮಲೆನಾಡಿನಲ್ಲಿ ಹೆಚ್ಚುತ್ತಿದೆ ಕಾಳ್ಗಿಚ್ಚಿನ ಭೀತಿ

ಇಲಾಖೆ, ರೈತರ ನಡುವಿನ ಸಂಘರ್ಷಕ್ಕೆ ಬಲಿಯಾಗುವುದೇ ಅರಣ್ಯ?
Last Updated 9 ಫೆಬ್ರುವರಿ 2021, 1:20 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಬಿಸಿಲಿನ ಹೆಚ್ಚಳ, ಅರಣ್ಯ ಇಲಾಖೆ ಹಾಗೂ ರೈತರ ನಡುವಿನ ಸಂಘರ್ಷ, ಎಂಪಿಎಂ ಗುತ್ತಿಗೆ ಅವಧಿಯನ್ನು ಮುಂದಿನ 40 ವರ್ಷಗಳಿಗೆ ವಿಸ್ತರಿಸಿರುವ ಹೊತ್ತಲ್ಲಿ ಅರಣ್ಯ ಇಲಾಖೆಗೆ ಮಲೆನಾಡಿನ ಕಾಡನ್ನು ಕಾಳ್ಗಿಚ್ಚಿನಿಂದ ಸಂರಕ್ಷಣೆ ಮಾಡುವುದು ಸವಾಲಾಗಿ ಪರಿಣಮಿಸಿದೆ.

ಪಶ್ಚಿಮ ಘಟ್ಟ ಸಾಲಿನ ಆಗುಂಬೆ ಸುತ್ತಮುತ್ತಲ ನಿತ್ಯಹರಿದ್ವರ್ಣದ ಪ್ರದೇಶವನ್ನು ಹೊರತುಪಡಿಸಿ ಎಲೆ ಉದುರುವ ಕಾಡುಗಳಲ್ಲಿ ಯಾವ ಹೊತ್ತಿನಲ್ಲಾದರೂ ಕಾಳ್ಗಿಚ್ಚು ಉಂಟಾಗುವ ಸಾಧ್ಯತೆ ಎದುರಾಗಿದೆ.

ಮಂಡಗದ್ದೆ, ಮುತ್ತೂರು, ಅಗ್ರಹಾರ ಹಾಗೂ ಕಸಬಾ ಹೋಬಳಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಎಲೆ ಉದುರುವ ಮರಗಳಲ್ಲಿ ಹೊಸ ಚಿಗುರು ಚಿಮ್ಮುತ್ತಿದೆ. ನೆಲಕ್ಕೆ ಬಿದ್ದ ತರಗೆಲೆಗಳು ಬಿಸಿಲಿನ ತೀವ್ರತೆಗೆ ಒಣಗಿದ್ದು ಬೆಂಕಿ ತಗುಲಿದರೆ ಇಡೀ ಕಾಡೇ ಸುಟ್ಟು ಕರಕಲಾಗುವಂಥ ಆತಂಕವಿದೆ.

ಸಾರ್ವಜನಿಕರು ಕಾಡನ್ನು ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಬಿದ್ದಿರುವ ತರಗೆಲೆಗಳನ್ನು ಗುಡಿಸಿ ಬೆಂಕಿ ತಡೆಗಟ್ಟಲು ಅಗ್ನಿ ನಂದಕ ಗೆರೆಗಳನ್ನು (ಫೈರ್ ಲೈನ್) ಅರಣ್ಯ ಇಲಾಖೆ ನಿರ್ಮಿಸುತ್ತಿದೆ. ಕಾಡಿಗೆ ಬೆಂಕಿ ತಗುಲದಂತೆ ಎಚ್ಚರಿಕೆ ಕ್ರಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಇಲಾಖೆ ಕೈಗೊಂಡಿದೆ. ಮಳೆಗಾಲ ಅರಂಭಕ್ಕೆ ಇನ್ನೂ ಮೂರ್ನಾಲ್ಕು ತಿಂಗಳು ಬಾಕಿ ಇದ್ದು ಅಲ್ಲಿಯವರೆಗೆ ಕಾಡಿಗೆ ಬೆಂಕಿ ತಗುಲದಂತೆ ಎಚ್ಚರವಹಿಸುವ ಸವಾಲು ಎದುರಾಗಿದೆ. ತಾಪಮಾನ ಹೆಚ್ಚಳ ಕಾಳ್ಗಿಚ್ಚಿಗೆ ಪೂರಕ ವಾತಾವರಣ ಸೃಷ್ಟಿಸಿರುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಇಲಾಖೆ ವಿರುದ್ಧ ಮುನಿಸಿಕೊಂಡ ರೈತರು: ಅಕ್ರಮ ಭೂ ಒತ್ತುವರಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಅರಣ್ಯ ಇಲಾಖೆ 192(ಎ) ಅಡಿಯಲ್ಲಿ ದೂರು ದಾಖಲಿಸಿ ಜೈಲಿಗಟ್ಟುವ ನಿರ್ಧಾರಕ್ಕೆ ಬಂದಿದೆ. ಈಗಾಗಲೇ ತಾಲ್ಲೂಕಿನ ಅನೇಕ ಕಡೆಗಳಲ್ಲಿನ ರೈತರು ಭೂ ಒತ್ತುವರಿ ಪ್ರಕರಣವನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಎದುರಿಸುತ್ತಿದ್ದಾರೆ. ಸಣ್ಣ ಪುಟ್ಟ ರೈತರ ಅಲ್ಪ ಸ್ವಲ್ಪ ಒತ್ತುವರಿಯನ್ನು ಅರಣ್ಯ ಇಲಾಖೆ ಸಹಿಸಿಕೊಳ್ಳುತ್ತಿಲ್ಲ. ಅರಣ್ಯ ಇಲಾಖೆ ಹಾಗೂ ರೈತರ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ವಿರುದ್ಧ ತಿರುಗಿ ಬಿದ್ದ ರೈತರು ‘ನಮ್ಮ ಸಹಕಾರವಿಲ್ಲದೇ ಕಾಡನ್ನು ಹೇಗೆ ರಕ್ಷಣೆ ಮಾಡಿಕೊಳ್ಳುತ್ತೀರಿ’ ಎಂಬ ಆಕ್ರೋಶದ ಮಾತುಗಳನ್ನು ಆಡುತ್ತಿದ್ದಾರೆ. ಇದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಿಬ್ಬಂದಿ ಕೊರತೆ: ಅರಣ್ಯ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಕನಿಷ್ಠ 2 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಒಬ್ಬ ಅರಣ್ಯ ರಕ್ಷಕನನ್ನು ನೇಮಿಸಲಾಗಿದೆ. ಹೆಚ್ಚು ವಿಸ್ತಾರದ ಅರಣ್ಯ ಪ್ರದೇಶದಲ್ಲಿ ಹಾನಿಯಾಗುವ ಪ್ರಮಾಣವನ್ನು ತಡೆಗಟ್ಟಲು ಕಾವಲುಗಾರರಿಂದ ಸಾಧ್ಯವಾಗುತ್ತಿಲ್ಲ.

ಇಲಾಖೆ ಎಚ್ಚರ ವಹಿಸಬೇಕು
ಅರಣ್ಯ ಇಲಾಖೆ ವಿರುದ್ಧ ರೈತರಿಗೆ ಅಸಮಾಧಾನವಿದೆ. ಎಂಪಿಎಂಗೆ ಮತ್ತೆ 40 ವರ್ಷದ ಗುತ್ತಿಗೆ ನೀಡಿರುವುದು, ಒತ್ತುವರಿ ತೆರವಿನ ಕಠಿಣ ನಿಯಮ ರೈತರ ಕೆಂಗಣ್ಣಿಗೆ ಗುರಿಯಾಗದಂತೆ ಇಲಾಖೆ ಎಚ್ಚರ ವಹಿಸಬೇಕಿದೆ.
-ಹೊಸಕೊಪ್ಪ ಸುಂದರೇಶ್, ಜಿಲ್ಲಾಧ್ಯಕ್ಷರು, ಮಲೆನಾಡು ಸಂಘರ್ಷ ಹೋರಾಟ ಸಮಿತಿ.

*
ಬೆಂಕಿ ನಂದಕ
ಕಾಡಿಗೆ ಬೆಂಕಿ ತಗುಲದಂತೆ ಬೆಂಕಿ ನಂದಕ (ಫೈರ್ ಲೈನ್)ನಿರ್ಮಿಸಿ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಗ್ರಾಮಾರಣ್ಯ ಸಮಿತಿಯ ಮೂಲಕ ಮಂಡಗದ್ದೆ ಭಾಗದಲ್ಲಿ ಜನಜಾಗೃತಿಯ ಶಿಬಿರ ನಡೆಸಲಾಗುತ್ತಿದೆ.
–ಸತೀಶ್ಚಂದ್ರ, ಎಸಿಎಫ್, ತೀರ್ಥಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT