ಶಿಕಾರಿಪುರ: 'ಪಾಕಿಸ್ತಾನ್ ಜಿಂದಾಬಾಂದ್' ಕೂಗಿದ ದೇಶದ್ರೋಹಿಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಮೃದುಧೋರಣೆ ತಾಳುತ್ತಿರುವುದು ಒಳ್ಳೆಯದಲ್ಲ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಯಾರಾದರೂ ಹಿಂದೂಸ್ತಾನ್ ಜಿಂದಾಬಾಂದ್ ಅಂದಿದ್ದರೆ ಅಲ್ಲೇ ಶೂಟ್ ಮಾಡುತ್ತಿದ್ದರು. ಪಾಕಿಸ್ತಾನ ಜಿಂದಾಬಾಂದ್ ಘೋಷಣೆ ಕೂಗಿದ ರಾಷ್ಟ್ರ ದ್ರೋಹಿಗಳನ್ನು ಓದ್ದು ಒಳಗೆ ಹಾಕಿ ಎಂದರೂ ಕಾಂಗ್ರೆಸ್ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಎಲ್ಲಿ ಅಲ್ಪಸಂಖ್ಯಾತರ ಮನಸ್ಸಿಗೆ ನೋವಾಗುತ್ತದೆ ಎಂದು ಯೋಚಿಸುತ್ತಿದ್ದು, ಈ ವಿಷಯದಲ್ಲಿ ಹುಡುಗಾಟ ಮಾಡುವ ಸರ್ಕಾರ ದೇಶದ್ರೋಹಿಗಳ ವಿಚಾರದಲ್ಲಿ ಮೃದುಧೋರಣೆ ತಾಳುತ್ತಿರುವುದು ಒಳ್ಳೆಯದಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣದ ಪರಿಣಾಮ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾಂದ್ ಘೋಷಣೆ ಕೇಳಿ ಬಂದಿದೆ.
ರಾಜ್ಯಸಭೆ ಸದಸ್ಯರ ಗೆದ್ದ ಸಂದರ್ಭದಲ್ಲಿ ಈ ರೀತಿ ಘೋಷಣೆ ಕೂಗಿದವರ ಮಾನಸಿಕ ಸ್ಥಿತಿ ಏನಿದೇ ಎಂದು ಪ್ರಶ್ನಿಸಿದ ಅವರು, ಈಗೂ ಕಾಲ ಮಿಂಚಿಲ್ಲ, ಎಫ್ ಎಸ್ ಎಲ್ ರಿಪೋರ್ಟ್ ಕಾಯುವ ಬದಲು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬರಗಾಲದ ಸಂಕಷ್ಟ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಸರ್ಕಾರದಲ್ಲಿ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಆದ್ದರಿಂದ ದಲಿತರು ಅಭಿವೃದ್ಧಿ ಮೀಸಲಿಟ್ಟ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನೀಡಿದ ಯೋಜನೆ ಕಡಿತಗೊಳಿಸಿದ್ದಾರೆ. ದೇಶದ 9ರಾಜ್ಯಗಳಲ್ಲಿ ಬರಗಾಲವಿದೆ. ಆದರೆ ಯಾವುದೇ ರಾಜ್ಯದ ಮುಖ್ಯಮಂತ್ರಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಯನ್ನು ಟೀಕೆ ಮಾಡುತ್ತಿಲ್ಲ. ರಾಜ್ಯದ ಖಜಾನೆ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.
ಆದರೆ ಮುಖ್ಯಮಂತ್ರಿ ಹತಾಶರಾಗಿ ಹಾಗೂ ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು