ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ಅವ್ಯವಸ್ಥೆ | ಹಿಂದೂ ವಿರೋಧಿ ಸರ್ಕಾರ ಕಾರಣ: ಕೆ.ಎಸ್.ಈಶ್ವರಪ್ಪ

Published 15 ಡಿಸೆಂಬರ್ 2023, 15:42 IST
Last Updated 15 ಡಿಸೆಂಬರ್ 2023, 15:42 IST
ಅಕ್ಷರ ಗಾತ್ರ

ಶಿವಮೊಗ್ಗ: ಶಬರಿಮಲೆ ದೇವಸ್ಥಾನದ ಆದಾಯದ ಹಣ ಸರ್ಕಾರಕ್ಕೆ ಜಮಾ ಆಗಿದೆ. ಆದರೆ, ಕೇರಳದ ಹಿಂದೂ ವಿರೋಧಿ ಸರ್ಕಾರ ಅಲ್ಲಿ ಯಾವುದೇ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಅಯ್ಯಪ್ಪ ದರ್ಶನಕ್ಕೆ ಅವಕಾಶ ವಿಳಂಬವಾಗಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಭಕ್ತರಿಗೆ ಅಲ್ಲಿ ಅಗತ್ಯ ಸವಲತ್ತು ಕಲ್ಪಿಸಲು ದೇವಸ್ಥಾನ ಮಂಡಳಿಗೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಅಯ್ಯಪ್ಪ ಸ್ವಾಮಿ ಸಮಿತಿ ಒಕ್ಕೂಟಗಳೊಂದಿಗೆ ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ. ಇದೊಂದು ದೊಡ್ಡ ಆಂದೋಲನವಾಗಲಿದೆ. ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ  ಆಗ್ರಹಿಸಿದರು.

ದೇಶದಿಂದ ಲಕ್ಷಾಂತರ ಭಕ್ತರು ಅನೇಕ ಪುಣ್ಯ ಕ್ಷೇತ್ರಗಳಿಗೆ ಹೋಗುತ್ತಾರೆ. ಎಲ್ಲಾ ಕಡೆ ಊಟ, ವಸತಿ ವ್ಯವಸ್ಥೆ ಇದೆ. ಎಲ್ಲೂ ಇಲ್ಲದ ಸಮಸ್ಯೆ ಅಲ್ಲಿ ಯಾಕೆ? ಆನ್ ಲೈನ್ ಬುಕ್ಕಿಂಗ್ ಹೆಸರಲ್ಲೂ ಕೂಡ ಮೋಸ ಆಗಿದೆ. ಬುಕ್ಕಿಂಗ್ ಮಾಡಿದವರಿಗೆ ಕೂಡ ವಾಹನಗಳು ಲಭ್ಯವಾಗಿಲ್ಲ ಎಂದರು.

ಶಬರಿಮಲೆ ಸಂರಕ್ಷಣಾ ಸಮಿತಿ ಸಂಚಾಲಕ ಎಂ.ಡಿ. ಸತೀಶ್ ಮಾತನಾಡಿ, ’ಶಬರಿಮಲೆ ಯಾತ್ರಿಕರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಲ್ಲಿನ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

ಹಲವಾರು ವರ್ಷಗಳಿಂದ ಕರ್ನಾಟಕದಿಂದ ಸಹಸ್ರಾರು ಜನ ಶಬರಿಮಲೆ ಯಾತ್ರೆಗೆ ತೆರಳುತ್ತಾರೆ. ಆದರೆ, ಇಷ್ಟು ಕೆಟ್ಟ ಅನುಭವ ಯಾವತ್ತೂ ಆಗಿಲ್ಲ. ದೇವರ ದರ್ಶನ ಪಡೆಯಲು 24 ಗಂಟೆ ಕಾಯುವಂತಹ ದುಸ್ಥಿತಿ ಇದೆ. ನೀರು, ಆಹಾರ, ಶೌಚಾಲಯಕ್ಕೆ ಪರದಾಡುವಂತಹ ಸ್ಥಿತಿ ಸರ್ಕಾರ ನಿರ್ಮಿಸಿದೆ ಎಂದು ದೂರಿದರು.

ಸೂಕ್ತ ಬಸ್ ಇಲ್ಲದೇ ಸನ್ನಿಧಿಗೆ ತಲುಪಲು ಸಾಧ್ಯವಾಗದೇ ಕೆಲವರು ವಾಪಸ್ ಮರಳಿದ್ದಾರೆ. ನೂಕು ನುಗ್ಗಲಿನ ನಿಯಂತ್ರಣಕ್ಕೆ ಪೊಲೀಸ್ ವ್ಯವಸ್ಥೆ ಸರಿಯಾಗಿರಲಿಲ್ಲ. ರಾತ್ರಿ ದರ್ಶನಕ್ಕೆ 12 ಗಂಟೆವರೆಗೆ ಅವಕಾಶ ನೀಡುತ್ತಿದ್ದರು. ಈ ಬಾರಿ 10.30ಕ್ಕೆ ಬಾಗಿಲು ಹಾಕಿ ಭಕ್ತಾದಿಗಳಿಗೆ ನಿರಾಶೆ ಮಾಡಿದ್ದಾರೆ ಎಂದರು.

ವರ್ಷಕ್ಕೆ ₹350 ಕೋಟಿಗೂ ಹೆಚ್ಚು ಆದಾಯ ತರುವ ಈ ದೇವಾಲಯವನ್ನು ಕೇಂದ್ರ ಸರ್ಕಾರ ಪಾರಂಪರಿಕ ದೇವಸ್ಥಾನ ಎಂದು ಘೋಷಿಸಿ ತನ್ನ ತೆಕ್ಕೆಗೆ ತೆಗೆದುಕೊಂಡು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.


ವಿನೋಬನಗರದ ಧರ್ಮಶಾಸ್ತ ದೇವಸ್ಥಾನದ ಸಂಚಾಲಕ ಕುಮಾರ್ ಮಾತನಾಡಿ, ಬಸ್ ಗಳನ್ನು ಮತ್ತು ಭಕ್ತರ ಖಾಸಗಿ ವಾಹನಗಳನ್ನು ಅನಾವಶ್ಯಕವಾಗಿ ತಡೆ ಹಿಡಿದು ಗೊಂದಲ ನಿರ್ಮಿಸಿದ್ದಾರೆ. ಸನ್ನಿಧಾನದಲ್ಲಿ ಯಾವುದೇ ನೂಕು ನುಗ್ಗಲು ಇರಲಿಲ್ಲ. ಕ್ಯಾಂಟೀನ್ ಗಳೂ ಕೂಡ ಖಾಲಿಯಾಗಿದ್ದವು. ದಾರಿಯಲ್ಲಿ ಯಾಕೆ ಈ ರೀತಿಯ ಅಡೆ ತಡೆ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT