ಶಿವಮೊಗ್ಗ: ‘ಅನಾಮಧೇಯ ಬೆದರಿಕೆ ಪತ್ರಗಳಿಗೆಲ್ಲ ನಾನು ಹೆದರಲ್ಲ, ಬಗ್ಗಲ್ಲ, ಕುಗ್ಗಲ್ಲ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅನಾಮಧೇಯ ಪತ್ರ ಬರೆದ ಹೇಡಿ ನನ್ನ ನಾಲಿಗೆ ಸೀಳುತ್ತೇನೆ ಎಂದು ಬೆದರಿಸುವ ಪ್ರಯತ್ನ ಮಾಡಿದ್ದಾನೆ. ನನ್ನ ನಾಲಿಗೆ ಸೀಳುವುದು ಅವನಿಂದ ಅಲ್ಲ, ಅವರಪ್ಪನಿಂದಲೂ ಆಗುವುದಿಲ್ಲ’ ಎಂದರು.
‘ಸಾವರ್ಕರ್ ವಿಷಯ ಬಂದಾಗ ದೇಶದ್ರೋಹಿಗಳೆಲ್ಲ ಹೊರಗೆ ಬರುತ್ತಿದ್ದಾರೆ. ಸಾವರ್ಕರ್ ಅವರ ವಿಚಾರ, ಜೀವನ ತಿಳಿದ ನಂತರ ದೇಶದ್ರೋಹಿಳಾಗಿದ್ದ ಕೆಲವರು ಮೌನವಾಗುತ್ತಿದ್ದರೆ. ಮತ್ತೆ ಕೆಲವರು ರಾಷ್ಟ್ರಭಕ್ತರಾಗಿ ಬದಲಾಗುತ್ತಿದ್ದಾರೆ. ಅಂಡಮಾನ್ ಜೈಲು ಭೇಟಿ ಮಾಡಿದವರು ಸಾವರ್ಕರ್ ಜೈಲಿನಲ್ಲಿ ಅನುಭವಿಸಿದ ಕಷ್ಟ ಅರಿತಿದ್ದಾರೆ’ ಎಂದರು.
‘ಸಾವರ್ಕರ್ ಅವರ ಬಗ್ಗೆ ಗೊಂದಲಗಳಿದ್ದಲ್ಲಿ ಬಹಿರಂಗ ಚರ್ಚೆಗೆ ಬರಲಿ. ಟಿಪ್ಪು ಎಂತಹ ದ್ರೋಹಿ ಎಂದು ಹೇಳುತ್ತೇನೆ. ಸಾವರ್ಕರ್ ಅವರು ದೇಶದ್ರೋಹಿ ಎನ್ನುವ ಬಗ್ಗೆ ಅವರಲ್ಲಿ ದಾಖಲೆಗಳಿದ್ದರೆ ಬಹಿರಂಗವಾಗಿ ಚರ್ಚಿಸಲಿ. ಅದು ಬಿಟ್ಟು ಅನಾಮಧೇಯ ಪತ್ರ ಬರೆದು ಬೆದರಿಸುವುದು ಹೇಡಿಗಳ ಲಕ್ಷಣ. ನಾನು ಇಂತಹ ಬೆದರಿಕೆಗೆ ಬಗ್ಗಲ್ಲ’ ಎಂದರು.