ಕುಂಸಿ (ಶಿವಮೊಗ್ಗ): ಇಲ್ಲಿನ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಮಠಪತಿ ತಮಗೆ ಸಿಕ್ಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರವನ್ನು ಅದರ ಮಾಲೀಕರಿಗೆ ಹಿಂದಿರುಗಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಲಾರಿ– ಕಾರಿನ ನಡುವೆ ಅಪಘಾತ ಸಂಭವಿಸಿತ್ತು.ಕಡೂರು ನಿವಾಸಿ, ಕೆಇಬಿ ನೌಕರ ಸುಬ್ಬಯ್ಯ, ಪತ್ನಿ ಭಾರತಿ ಅವರಿದ್ದ ಕಾರು ಅಪಘಾತಕ್ಕೀಡಾಗಿದ್ದು, ಮಹಿಳೆ ಮೃತಪಟ್ಟಿದ್ದರು.
ನವೀನ್ ಕುಮಾರ್ ಆಯನೂರಿಗೆ ತೆರಳುವ ಮಾರ್ಗದಲ್ಲಿ ಅಪಘಾತಗೊಂಡಿದ್ದ ಕಾರನ್ನು ಪರಿಶೀಲಿಸಿದ್ದರು. ಆಗ ಬ್ಯಾಗ್ ಕಂಡುಬಂದಿದ್ದು, ಠಾಣೆಗೆ ಒಯ್ದು ಪರಿಶೀಲಿಸಿದಾಗ ಆಭರಣಗಳಿದ್ದುದು ಕಂಡುಬಂತು.
ಸುಬ್ಬಯ್ಯ ಅವರು ಆಭರಣ ನಾಪತ್ತೆಯಾದ ಬಗ್ಗೆ ದೂರು ನೀಡಿರಲಿಲ್ಲ. ನವೀನ್ ಕುಮಾರ್ ಅವರು ಸುಬ್ಬಯ್ಯ ಅವರಿಗೆ ಕರೆ ಮಾಡಿ ಠಾಣೆಗೆ ಕರೆಯಿಸಿ ಆಭರಣಗಳನ್ನು ನೀಡಿದರು. ಇವುಗಳ ಮೌಲ್ಯ ಅಂದಾಜು ₹ 15 ಲಕ್ಷ ಎನ್ನಲಾಗಿದೆ.