ಆನವಟ್ಟಿ: ಇಲ್ಲಿನ ಕೋಟಿಪುರ ಗ್ರಾಮದ ಕೂಲಿ ಕಾರ್ಮಿಕನ ಮಗ ಪ್ರಕಾಶ್ ನಾಯ್ಕ ಅವರು ಬಿ.ಎ. ಪದವಿಯ ತತ್ವಶಾಸ್ತ್ರ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಕೂಲಿ ಮಾಡಿ ಜೀವನ ಸಾಗಿಸುವ ವಾಲ್ಯಾನಾಯ್ಕ ಹಾಗೂ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಸೀತಾಬಾಯಿ ದಂಪತಿ ಪುತ್ರ ಪ್ರಕಾಶ್ ನಾಯ್ಕ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮಗನ ಓದಿಗೆ ಬಡತನ ಅಡ್ಡಿ ಆಗಬಾರದು ಎಂದು ದಂಪತಿಗಳು ಇಬ್ಬರು ಕೂಲಿ ಮಾಡಿ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ.
‘ಮಗನ ಸಾಧನೆಯಿಂದ ನಮ್ಮ ಕಷ್ಟಗಳು ಎಲ್ಲ ಮರೆತಿವೆ. ಓದಬೇಕು ಎಂದು ಹಂಬಲ ಪಡುತ್ತಿದ್ದ ಮಗ ಚಿನ್ನದ ಪದಕ ಗಳಿಸುವ ಮಟ್ಟಿಗೆ ಓದಿರುವುದು ನಮಗೆ ಹೆಮ್ಮೆ ಎನ್ನಿಸುತ್ತಿದೆ’ ಎಂದು ತಾಯಿ ಸೀತಾಬಾಯಿ ಸಂತಸ ಹಂಚಿಕೊಂಡರು.