ತುಮರಿ: ಶರಾವತಿ ಹಿನ್ನೀರಿನ ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಗ್ರಾಮದಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕುವ ಘಟನೆಗಳು ಹೆಚ್ಚುತ್ತಿವೆ.
ಇಲ್ಲಿನ ಚನ್ನಗೊಂಡ ಗ್ರಾಮದ ಸಿಗ್ಗಲು, ಖಡಕಂಟ, ಔಡಳ್ಳಿ, ಯಲದಮಕ್ಕಿ, ಮದನಗೋಡು ಹಳ್ಳಿಗಳಲ್ಲಿ ಚಿರತೆ ದಾಳಿ ಹೆಚ್ಚಾಗಿದೆ. ಈಗಾಗಲೇ 5ಕ್ಕೂ ಹೆಚ್ಚು ಹಸುಗಳನ್ನು ಕೊಂದು ಹಾಕಿದ್ದು, ರೈತರ ಬೆಳೆಗಳನ್ನು ಸಹ ಹಾನಿ ಮಾಡುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
‘ಚಿರತೆ ಭಯದಿಂದ ಜನರು ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದು, ಶೀಘ್ರ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ‘ಚಿರತೆ ಹಿಡಿಯಲು ಬೋನ್ ಆಳವಡಿಸಲಾಗಿದ್ದು, ಶೀಘ್ರ ಚಿರತೆ ಸೆರೆ ಹಿಡಿಯಲಾಗುವುದು. ಒಂಟಿ ಮನೆಯ ರೈತರು ಜಾಗರೂಕತೆಯಿಂದ ಇರಬೇಕು’ ಎಂದು ತಿಳಿಸಿದ್ದಾರೆ.