ಕೋಣಂದೂರು: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಗ್ರಾಮಸಭೆಯಲ್ಲೇ ಅಭಿವೃದ್ಧಿ ವಿಚಾರಕ್ಕೆ ಸದಸ್ಯರಿಬ್ಬರ ಮಾತಿನ ಚಕಮಕಿ ತಾರಕಕ್ಕೆ ಏರಿ, ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಇಲ್ಲಿನ ದೊಡ್ಡಕೆರೆಯ ಅಭಿವೃದ್ಧಿಗೆ ಜಲ ಸಂಪನ್ಮೂಲ ಇಲಾಖೆಯಿಂದ ಬಿಡುಗಡೆಯಾದ ₹ 2 ಕೋಟಿ ವಿಚಾರವಾಗಿ ಗ್ರಾಮ ಸಭೆಯ ಆರಂಭಕ್ಕೂ ಮುನ್ನ ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಸಿ. ಪೂರ್ಣೇಶ್ ಮತ್ತು ಕೆ.ಎನ್. ಸುರೇಶ್ ನಡುವೆ ಮಾತುಕತೆ ನಡೆಯುತ್ತಿತ್ತು.
ಈ ವೇಳೆ ಚರ್ಚೆ ತಾರಕಕ್ಕೆ ಏರಿ ಇಬ್ಬರೂ ವೈಯಕ್ತಿಕ ಮಟ್ಟಕ್ಕೆ ಇಳಿದು ಜಗಳ ಆರಂಭಿಸಿ ಪರಸ್ಪರ ಹೊಡೆದಾಡಿಕೊಂಡರು. ‘ಇಬ್ಬರೂ ತಳ್ಳಾಡಿಕೊಂಡು ಪೂರ್ಣೇಶ್ ಅವರು ಸುರೇಶ್ ಅವರ ಕೆನ್ನೆಗೆ ಹೊಡೆದರು. ಆಗ ಸುರೇಶ್ ಮೂಗಿನಿಂದ ರಕ್ತಸ್ರಾವವಾಗಿದೆ’ ಎಂದು ದೂರು ದಾಖಲಾಗಿದೆ.
ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಯಲ್ಲಿ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೂರ್ಣೇಶ್ ಅವರಿಗೂ ಗಾಯಗಳಾಗಿದ್ದು, ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.