ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ 2ಬಿ ಮೀಸಲಾತಿ ರದ್ದು: ಮುಖಂಡರಿಂದ ಹೋರಾಟದ ಎಚ್ಚರಿಕೆ

2ಬಿ ಮೀಸಲಾತಿ ಸಂರಕ್ಷಣಾ ವೇದಿಕೆ
Last Updated 28 ಮಾರ್ಚ್ 2023, 6:20 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯ ಸರ್ಕಾರ 2ಬಿ ಮೀಸಲಾತಿ ರದ್ದುಪಡಿಸಿರುವ ನಿರ್ಧಾರವನ್ನು ‘2ಬಿ ಮೀಸಲಾತಿ ಸಂರಕ್ಷಣಾ ವೇದಿಕೆ’ಯು ತೀವ್ರವಾಗಿ ಖಂಡಿಸುತ್ತದೆ ಎಂದು ವೇದಿಕೆಯ ಮುಖಂಡ ಶಹರಾಜ್ ಮುಜಾಹಿದ್ ಸಿದ್ದಿಕಿ ಹೇಳಿದರು.

‘ಸರ್ಕಾರಗಳು ಅಲ್ಪಸಂಖ್ಯಾತರ ಕಲ್ಯಾಣ ಮರೆತು, ಮತಬ್ಯಾಂಕ್ ಆಗಿ ಮಾಡಿಕೊಂಡಿವೆ. ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶದಿಂದ ಯಾವುದೇ ಸಾಂವಿಧಾನಿಕ ತಳಹದಿ ಇಲ್ಲದೆ ತರಾತುರಿಯಲ್ಲಿ ಮೀಸಲಾತಿ ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿದೆ. ತಕ್ಷಣವೇ ಇದನ್ನು ಹಿಂಪಡೆಯಬೇಕು’ ಎಂದು ಸೋಮವಾರ ಸುದ್ಧಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಧರ್ಮದ ಆಧಾರದಲ್ಲಿ ಮೀಸಲಾತಿ ನಿಲ್ಲಿಸುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಮುಸ್ಲಿಂ ಎನ್ನುವುದು ಧರ್ಮವಲ್ಲ. ಅದು ಇಸ್ಲಾಂ ಧರ್ಮದ ಸಮುದಾಯ ಸೂಚಕ ಪದ. ಪರಿಶಿಷ್ಟರಲ್ಲಿ ಹಿಂದುಳಿದ ವರ್ಗಗಳಲ್ಲಿ ಹೇಗೆ ಸಮುದಾಯಗಳು ಬರುತ್ತವೆಯೋ ಹಾಗೆಯೇ ಇಸ್ಲಾಂ ಧರ್ಮದಲ್ಲೂ ಮುಸ್ಲಿಂ ಎನ್ನುವುದು ಒಂದು ಸಮುದಾಯ ಪ್ರತಿಬಿಂಬಿಸುತ್ತದೆಯೇ ಹೊರತೂ ಅದು ಧರ್ಮವಲ್ಲ. ಆದರೆ, ಸರ್ಕಾರ ಇದನ್ನು ಧರ್ಮವಾಗಿ ಪ್ರತಿಬಿಂಬಿಸುತ್ತಿದೆ’ ಎಂದು ಅಸಮಾಧಾನ ಹೊರಹಾಕಿದರು.

‘ನಾವು ಮೀಸಲಾತಿಯ ವಿರೋಧಿಗಳಲ್ಲ. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವರಿಗೆ ಮೀಸಲಾತಿ ನೀಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಮುಸ್ಲಿಂ ಸಮುದಾಯದ 2ಬಿ ಮೀಸಲಾತಿಯನ್ನು ರದ್ದುಗೊಳಿಸಿರುವುದನ್ನು ಖಂಡಿಸುತ್ತೇವೆ. ಇದರ ಹಿಂದೆ ರಾಜಕೀಯ ಉದ್ದೇಶವಿದೆ. ಮುಸ್ಲಿಂ ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದೆ ಉಳಿದಿದೆ. ದಲಿತ ವರ್ಗದವರಿಗಿಂತ ಕೆಳಮಟ್ಟದಲ್ಲಿ ಇದ್ದೇವೆ. ಆದರೆ, ಸರ್ಕಾರ ನಮ್ಮ ಮೀಸಲಾತಿ ಕಸಿದುಕೊಂಡು, ಆರ್ಥಿಕ ದುರ್ಬಲ ವರ್ಗದಲ್ಲಿ ಮೀಸಲಾತಿ ನೀಡುತ್ತೇವೆ ಎಂದು ಮೂಗಿಗೆ ತುಪ್ಪ ಸವರುತ್ತಿದೆ’ ಎಂದು ಆರೋಪಿಸಿದರು.

‘ಮುಂದುವರಿದ ಸಮುದಾಯಕ್ಕೆ ಮಾತ್ರ ಈ ಮೀಸಲಾತಿ ತಲುಪುತ್ತದೆಯೇ ಹೊರತು ನಮಗೆ ತಲುಪುವುದಿಲ್ಲ. ನಾವು ಎಲ್ಲವನ್ನು ಸಹಿಸಿಕೊಂಡಿದ್ದೇವೆ. ಈ ಹಿಂದೆ ಹೋರಾಟದ ಫಲವಾಗಿ ಪ್ರವರ್ಗ 2ಬಿ ಅಡಿಯಲ್ಲಿ ಶೇ 4ರಷ್ಟು ಮೀಸಲಾತಿ ನೀಡಲಾಗಿತ್ತು. ನಾವು ಕೇಳಿದ್ದು ಶೇ 8ರಷ್ಟು ಮೀಸಲಾತಿ. ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ನಮ್ಮ ಮಾತನ್ನು ಕೇಳದೆ ನ್ಯಾಯಾಲಯದ ಮಧ್ಯ ಪ್ರವೇಶದಿಂದ ಶೇ 4ರಷ್ಟು ಮೀಸಲಾತಿ ನೀಡಿತ್ತು. ಆದರೆ, ಈಗ ಬಿಜೆಪಿ ಸರ್ಕಾರ ಆ ಮೀಸಲಾತಿಯನ್ನೂ ಕಸಿದುಕೊಂಡಿದೆ’ ಎಂದು
ದೂರಿದರು.

ಸುದ್ದಿಗೋಷ್ಠಿ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ‘ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೂಡಲೇ ಮರುಪರಿಶೀಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹೋರಾಟ ಅನಿವಾರ್ಯವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಪ್ರಮುಖರಾದ ಡಾ.ಹಬೀಬುರ್ ರೆಹಮಾನ್, ಸೈಯದ್ ಲಿಯಾಖತ್, ಸುಹೇಲ್ ಅಹ್ಮದ್, ರಹೀಂ, ಮೊಹಮ್ಮದ್ ನೋಮಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT