ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಕ್ಷೇತ್ರ ವಿಸ್ತಾರವಾಗಿದೆ. ನಿನ್ನೆ ಮೊನ್ನೆ ಫೀಲ್ಡ್ಗೆ ಇಳಿದು ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಕೆ.ಎಸ್. ಈಶ್ವರಪ್ಪ ಸ್ಪರ್ಧೆ ನಾಮಕಾವಸ್ತೆಯಾಗಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ಕ್ಷೇತ್ರದ ಮೂಲೆಗಳನ್ನು ತಲುಪುವುದಕ್ಕೆ ಅವರಿಗೆ ಸಾಧ್ಯವಿಲ್ಲ. ಸ್ಪರ್ಧೆಯಿಂದ ಬಹುತೇಕ ಹಿಂದೆ ಸರಿಯುತ್ತಾರೆ ಎಂದು ಸೋಮವಾರ ಬಂಟರ ಭವನದಲ್ಲಿ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಭಿವೃದ್ಧಿಗೆ ಮತ ಕೊಡುವ ಜನರು ಬೇರೆ ಯಾವ ವಿಚಾರಗಳಿಗೂ ಮತ ನೀಡುವುದಿಲ್ಲ. ಮೋದಿ ಮತ್ತು ಭಾರತವನ್ನು ಗೆಲ್ಲಿಸುತ್ತಾರೆ. ಬಿ.ವೈ. ರಾಘವೇಂದ್ರ ಅವರು ಮೂರು ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಸ್ತೆ, ಸೇತುವೆ, ರೈಲ್ವೆ, ಸಮುದಾಯ ಭವನ ನೀಡಿದ್ದಾರೆ ಎಂದು ಹೇಳಿದರು.
‘ಶರಾವತಿ, ಅರಣ್ಯ, ಬಗರ್ಹುಕುಂ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದ್ದೇವೆ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ 1952ರಿಂದ ಇದೆ. ಕಾಂಗ್ರೆಸ್ ಸರ್ಕಾರವೇ ಅದನ್ನು ಕಡೆಗಣಿಸಿದೆ. 2017ರಲ್ಲಿ ಕೇಂದ್ರದ ಅನುಮತಿ ಪಡೆಯದೆ ಅರಣ್ಯ ಭೂಮಿ ನೋಟಿಫಿಕೇಷನ್ ಮಾಡಿರುವುದರಿಂದ ಸಮಸ್ಯೆಯಾಗಿದೆ ಎಂದು ಉತ್ತರಿಸಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಾಳೇಬೈಲು ರಾಘವೇಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಹೆದ್ದೂರು ನವೀನ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ಮುಖಂಡರಾದ ನಾಗರಾಜ ಶೆಟ್ಟಿ, ಸೊಪ್ಪುಗುಡ್ಡೆ ರಾಘವೇಂದ್ರ, ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.