ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಭಿವೃದ್ಧಿಗೆ 2 ವರ್ಷಗಳಲ್ಲಿ ₹ 8,929 ಕೋಟಿ ಅನುದಾನ

ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ
Last Updated 1 ಜೂನ್ 2021, 13:55 IST
ಅಕ್ಷರ ಗಾತ್ರ

ಶಿವಮೊಗ್ಗ:ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಸಂಪರ್ಕ ಸೇತುವೆಗಳ ನಿರ್ಮಾಣ ಹಾಗೂ ಪ್ರಮುಖ ಕಾಮಗಾರಿಗಳಿಗೆ ಎರಡು ವರ್ಷಗಳಲ್ಲಿ ₹ 8,929 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹೆದ್ದಾರಿಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ, ಸಚಿವ ಗಡ್ಕರಿ ಅವರು ವೇಗದ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. 2014ರ ಪೂರ್ವದಲ್ಲಿ ರಾಷ್ಟ್ರದಲ್ಲಿ ದಿನಕ್ಕೆ 12 ಕಿ.ಮೀ. ರಸ್ತೆ ಅಭಿವೃದ್ಧಿ ಮಾಡಲಾಗುತ್ತಿತ್ತು. ಬಿಜೆಪಿ ಬಂದ ನಂತರ ದಿನಕ್ಕೆ 37 ಕಿ.ಮೀ. ವಿಸ್ತರಿಸಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಶ್ಲಾಘಿಸಿದರು.

ಜಿಲ್ಲೆಯ ಐದು ಕಾಮಗಾರಿಗಳಿಗೆ ₹ 605 ಕೋಟಿ ಮಂಜೂರಾಗಿದೆ. ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿರುವ ಸಂದೇಶ್ ಮೋಟಾರ್‌ನಿಂದ ಹರಕೆರೆವರೆಗೆ 4 ಪಥದ ರಸ್ತೆ ನಿರ್ಮಾಣಕ್ಕೆ ₹ 38 ಕೋಟಿ, ಬೈಂದೂರು-ರಾಣೇಬೆನ್ನೂರು ಮಾರ್ಗದ 29.45 ಕಿ.ಮೀ ರಸ್ತೆ ನಿರ್ಮಾಣ, ಶರಾವತಿ ಹಿನ್ನೀರಿನಲ್ಲಿ 640 ಮೀ ಉದ್ದದ ಸೇತುವೆ, 16 ಕಿ.ಮೀ ರಸ್ತೆ ನಿರ್ಮಾಣಕ್ಕೆ ₹ 240 ಕೋಟಿ, ತುಮಕೂರು-ಹೊನ್ನಾವರ ರಸ್ತೆಯಲ್ಲಿ ಸಿಂಹಧಾಮದಿಂದ ಆನಂದಪುರದವರೆಗೆ ಕುಂಸಿ ಗ್ರಾಮದ ಬೈಪಾಸ್‌ನಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ₹ 325 ಕೋಟಿ, ಚಿತ್ರದುರ್ಗ-ಶಿವಮೊಗ್ಗ ರಸ್ತೆಯ ಹೊಳೆಹೊನ್ನೂರು ಹಳೆಯ ಭದ್ರಾ ಸೇತುವೆ ದುರಸ್ತಿಗೆ ₹ 2 ಕೋಟಿ ಮಂಜೂರಾಗಿದೆ ಎಂದರು.

ಐದು ಕಾಮಗಾರಿಗಳ ಯೋಜನಾ ವರದಿ ತಯಾರಿಸಲು ₹ 5.30 ಕೋಟಿ ಬಿಡುಗಡೆಯಾಗಿದೆ. ತುಮಕೂರಿನಿಂದ ಶಿವಮೊಗ್ಗವರೆಗಿನ 214.45 ಕಿ.ಮೀ ಚತುಷ್ಪಥ ರಸ್ತೆಗೆ ₹ 6,397.47 ಕೋಟಿ, ಚಿತ್ರದುರ್ಗದಿಂದ ಶಿವಮೊಗ್ಗ ಮಾರ್ಗದಲ್ಲಿ ಬಾಕಿ ಉಳಿದ 36.29 ಕಿ.ಮೀ ರಸ್ತೆಯ ನಿರ್ಮಾಣದಲ್ಲಿ ಮೂರು ರೈಲ್ವೆ ಮೇಲು ಸೇತುವೆ, ಭದ್ರಾ ನದಿಗೆ ಹೊಸ ಸೇತುವೆ, ಕೆಳ ಮಾರ್ಗಗಳು, ಟ್ರಕ್‌ನಿಲ್ದಾಣ, ಕಿರು ಸೇತುವೆಗಳ ನಿರ್ಮಾಣ, ಜಂಕ್ಷನ್‌ಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹ 516.96 ಕೋಟಿ ಮಂಜೂರಾತಿ ದೊರೆತಿದೆ. ಟೆಂಡರ್ ಪ್ರಕ್ರಿಯೆ ಅಂತಿಮವಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ವಿವರ ನೀಡಿದರು.

ಶಿವಮೊಗ್ಗದ ವಿದ್ಯಾನಗರದ ಬಳಿ ₹ 43.94 ಕೋಟಿ ವೆಚ್ಚದಲ್ಲಿ ನೂತನ ವೃತ್ತಾಕಾರದ ರೈಲ್ವೆ ಮೇಲು ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಶಿವಮೊಗ್ಗದ ಬೈಪಾಸ್ ರಸ್ತೆಯ ಸೇತುವೆ ಪಕ್ಕದಲ್ಲಿ ಮತ್ತೊಂದು ಸೇತುವೆ ನಿರ್ಮಾಣಕ್ಕೆ ₹ 20.12 ಕೋಟಿ, ₹ 96.08 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ-ಶೃಂಗೇರಿ ಮಾರ್ಗದ 50 ಕಿ.ಮೀ ರಸ್ತೆ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್‌ಗನ್ನಿ, ‘ಸೂಡಾ’ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ‘ಕಾಡಾ’ ಅಧ್ಯಕ್ಷೆ ಪವಿತ್ರಾ ರಾಮಯ್ಯ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಪುರುಷೋತ್ತಮ್, ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ, ಮುಖಂಡರಾದ ಜಗದೀಶ್, ಶಿವರಾಜ್, ವಿ.ಆರ್.ಮಧುಸೂದನ್, ಕೆ.ವಿ.ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT