ಆನಂದಪುರ: ಪರಭಾಷಾ ವ್ಯಾಮೋಹ ಹೆಚ್ಚಾಗಿರುವ ಕಾರಣ ಪೋಷಕರಿಗೆ ತಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಹುಚ್ಚು ಹೆಚ್ಚಾಗುತ್ತಿದೆ ಎಂದು ಮುರುಘಾ ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಸಮೀಪದ ಗಿಳಾಲಗುಂಡಿ ಸಮೀಪದ ಕೊಲ್ಲಿ ಬಚ್ಚಲು ಡ್ಯಾಂ ಆವರಣದಲ್ಲಿ ರಾಯಲ್ ಕ್ಲಬ್ನಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳಿಂದ ಅಪ್ಪ ಅಮ್ಮ ಎಂದು ಕರೆಸಿಕೊಳ್ಳಲೂ ಸಂಕೋಚ ಪಡುತ್ತಿರುವುದನ್ನು ನೋಡಿದರೆ ಕನ್ನಡಾಭಿಮಾನ, ಭಾಷೆಯ ಸ್ಥಿತಿ ತಿಳಿಯುತ್ತದೆ. ಮಮ್ಮಿ ಎನ್ನುವ ಬದಲು ಅಮ್ಮ ಎಂದರೆ ಅವರ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎನ್ನುವ ಮನಸ್ಥಿತಿ ತಲುಪಿದ್ದಾರೆ ಎಂದು ವಿಷಾದಿಸಿದರು.
‘ನಾವು ಯಾವುದೇ ರಾಜ್ಯಗಳಿಗೆ ಹೊದರೂ ಅವರ ಸ್ಥಳೀಯ ಭಾಷೆಯಲ್ಲೇ ವ್ಯವಹಾರಿಸುತ್ತಾರೆ. ಆದರೆ, ಹೋರರಾಜ್ಯದವರು ನಮ್ಮಲ್ಲಿಗೆ ಬಂದಾಗ ಅವರಿಗೆ ನಮ್ಮ ಭಾಷೆ ಕಲಿಸುವ ಬದಲು ಅವರ ಭಾಷೆಯಲ್ಲೇ ಮಾತನಾಡಲು ಪ್ರಯತ್ನಿಸುವುದು ಎದ್ದು ಕಾಣುತ್ತಿರುವುದು ದುರಂತವಾಗಿದೆ’ ಎಂದು ಹೇಳಿದರು.
ಉಪನ್ಯಾಸಕ ಡಾ.ಶ್ರೀಪತಿ ಹಳಗುಂದ ಮಾತನಾಡಿ, ‘ಕನ್ನಡವನ್ನು ಶುದ್ಧವಾಗಿ ಬರೆಯುವ, ಮಾತನಾಡುವ ಕೌಶಲವನ್ನು ಬೆಳೆಸಿಕೊಳ್ಳುವುದೇ ಕನ್ನಡಕ್ಕೆ ಮಾಡುವ ನಿಜವಾದ ಸೇವೆಯಾಗಿದೆ. ಕನ್ನಡಿಗರಲ್ಲದ ಕವಿಗಳು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ. ಆದರೆ, ಕನ್ನಡಿಗರಾದ ನಮ್ಮ ಕೊಡುಗೆ ಏನು ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಕರ್ಮ ಸಿದ್ಧಾಂತದ ಮೇಲೆ ನಂಬಿಕೆ ಇರುವ ನಾಡು ನಮ್ಮದಾಗಿದೆ. ನಮ್ಮವರು ಕನ್ನಡ ಮಾತನಾಡಿದರೆ ಅಪಮಾನ ಎಂದು ಭಾವಿಸುತ್ತಿರುವುದು ದುರದೃಷ್ಟಕರ. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ, ಭಾಷಾ ಕೊರತೆಯಿಂದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಕಷ್ಟವಾಗಿದೆ’ ಎಂದು ಹೇಳಿದರು.
ಗುರುಗಳಾದ ರೆವರೆಂಡ್ ಫಾದರ್ ಮಿನಿನ್ ಅಲ್ಮೆಡಾ, ಜಾಮಿಯಾ ಮಸೀದಿಯ ಹಜರತ್ ಮೌಲಾನಾ ಮುಫ್ತಿ ಮಹಮದ್ ಖಾಸ್ಮಿ ಸಾಹೇಬ್, ರಾಯಲ್ ಕ್ಲಬ್ ಅಧ್ಯಕ್ಷರಾದ ರಾಘವೇಂದ್ರ ಶೇಟ್, ಪ್ರಮುಖರಾದ ಮಹೇಶ್, ಜಲೀಲ, ಶಿವಲಿಂಗಯ್ಯ ಇದ್ದರು.