ರಾಜ್ಯದ ಮೂಲೆ ಮೂಲೆಗೂ ಗಮಕ ಕಲೆಯ ಘಮವನ್ನು ಬೀರಿದ ಎಚ್.ಆರ್.ಕೇಶವಮೂರ್ತಿ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು.
1934ರ ಫೆ.22 ರಂದು ಹೊಸಹಳ್ಳಿ ರಾಮಸ್ವಾಮಿ ಶಾಸ್ತ್ರಿ ಮತ್ತು ಲಕ್ಷ್ಮೀದೇವಮ್ಮ ದಂಪತಿಯ ಪುತ್ರನಾಗಿ ಜನಿಸಿದ ಅವರು ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು. ತಂದೆ-ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣದ ಕಥನಗಳಿಂದ ಉತ್ತೇಜಿತರಾಗಿ, 16 ನೇ ವಯಸ್ಸಿನಿಂದ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡಿದ್ದರು. 100 ಕ್ಕೂ ಹೆಚ್ಚು ಶೈಲಿಯಲ್ಲಿ ವಾಚನ ಮಾಡುವ ಮೂಲಕ ‘ಶತರಾಗಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.