ತೀರ್ಥಹಳ್ಳಿ: ಕರ್ನಾಟಕ ರಕ್ಷಣಾ ವೇದಿಕೆ, ಆಟೊ ಚಾಲಕರು ಮತ್ತು ಮಾಲೀಕರ ಸಂಘ, ರೋಟರಿ ಸಂಸ್ಥೆ ಮತ್ತು ಲಯನ್ಸ್ ಸಂಸ್ಥೆಯಿಂದ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನೇತ್ರದಾನ ನೋಂದಣಿ ಶಿಬಿರ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಶಿಬಿರದಲ್ಲಿ 40 ಜನರು ಬಹು ಅಂಗಾಗ, 358 ಜನ ನೇತ್ರದಾನ ಮಾಡುವುದಕ್ಕೆ ಹೆಸರು ನೋಂದಾಯಿಸಿದರು.
ಪುನೀತ್ ರಾಜ್ಕುಮಾರ್ ಪ್ರೇರಣೆಯಿಂದ ನೇತ್ರದಾಕ್ಕೆ ತಾಲ್ಲೂಕಿನಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ವಿವಿಧ ಸಂಘ–ಸಂಸ್ಥೆಗಳಿಂದ ನಡೆದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಂಜೆ ‘ಅಪ್ಪು ಅಮರ’ ಸಂಗೀತ ಕಾರ್ಯಕ್ರಮ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಿತು.
ನೇತ್ರದಾನ ನೋಂದಣಿ ಶಿಬಿರದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕರವೇ ಅಧ್ಯಕ್ಷ ಯಡೂರು ಸುರೇಂದ್ರ, ಆಟೊ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ರೋಟರಿ ಅಧ್ಯಕ್ಷ ಶ್ರೀಕಾಂತ್ ವೈ.ಟಿ., ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಟರಾಜ್, ಪಾಂಡುರಂಗಪ್ಪ ಅವರೂ ಈ ಸಂದರ್ಭದಲ್ಲಿ ಇದ್ದರು.